Saturday, July 27, 2024

ಬಿಎಸಿಎ-ಕೆಆರ್‌ಎಸ್‌ ತಂಡಕ್ಕೆ ಚಾಂಪಿಯನ್‌ ಪಟ್ಟ

 

ಇಲ್ಲಿನ ಬಿ.ಸಿ. ಆಳ್ವಾ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆದ ಆಹ್ವಾನಿತ ಕ್ರಿಕೆಟ್‌ ಸರಣಿಯಲ್ಲಿ ಬಿಎಸಿಎ – ಕೆಆರ್‌ಎಸ್‌ ಇಲೆವೆನ್‌ ತಂಡ ಪ್ರಶಸ್ತಿ ಗೆದ್ದುಕೊಂಡಿದೆ. ಪ್ರವಾಸಿ ಮುಂಬಯಿಯ ರಾಯನ್‌ ಇಂಡಿಯನ್ಸ್‌ ತಂಡ ರನ್ನರ್‌ಅಪ್‌ ಪ್ರಶಸ್ತಿ ಗೆದ್ದುಕೊಂಡಿದೆ.

ಬ್ರಹ್ಮಾವರದ ಬೆಳ್ಳಿಪ್ಪಾಡಿ ಆಳ್ವಾಸ್‌ ಕ್ರಿಕೆಟ್‌ ಅಕಾಡೆಮಿ ಮತ್ತು ಕಟಪಾಡಿಯ ಕೆಆರ್‌ಎಸ್‌ ಕ್ರಿಕೆಟ್‌ ಆಕಾಡೆಮಿ ಈ ಕ್ರಿಕೆಟ್‌ ಟೂರ್ನಿಯನ್ನು ಆಯೋಜಿಸಿದ್ದವು, ನಿಟ್ಟೆ ವಿಶ್ವವಿದ್ಯಾನಿಲಯದ ಕುಲಸಚಿವ ನಿಟ್ಟೆ ವಿನಯ್‌ ಹೆಗ್ಡೆ ಅವರು ಮೂರು ದಿನಗಳ ಟೂರ್ನಿಗೆ ಚಾನಲೆ ನೀಡಿರು.

ಮೂರು ಪಂದ್ಯಗಳಲ್ಲಿ ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ ತಂಡ ಎರಡರಲ್ಲಿ ಜಯ ಗಳಿಸಿತು. ಒಂದು ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಬಿಎಸಿಎ ಕೋಚ್‌ ವಿಜಯ್‌ ಆಳ್ವಾ ಮತ್ತು ಕೆಆರ್‌ಎಸ್‌ ಕೋಚ್‌ ಉದಯ್‌ ಕಟಪಾಡಿ ಈ ಟೂರ್ನಿಯನ್ನು ಆಯೋಜಿಸಿದ್ದರು. ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ ತಂಡದ ನಾಯಕತ್ವನ್ನು ಉದಯ್‌ ಕಟಪಾಡಿ ಹಾಗೂ ರಾಯಲ್‌ ಇಂಡಿಯನ್ಸ್‌ ತಂಡದ ನಾಯಕತ್ವನ್ನು ಪ್ರದೀಪ್‌ ಗೋಡ್ಬೊಲೆ ವಹಿಸಿದ್ದರು.

ಮೊದಲ ಪಂದ್ಯ ಬಿಎಸಿಎ-ಕೆಆರ್‌ಎಸ್‌ಗೆ ಜಯ:

35 ಓವರ್‌ಗಳ ಮೊದಲ ಪಂದ್ಯದಲ್ಲಿ ಟಾಸ್‌ ಗೆದ್ದ ರಾಯಲ್‌ ಇಂಡಿಯನ್ಸ್‌ ತಂಡ ಫೀಲ್ಡಿಂಗ್‌ ಆಯ್ದುಕೊಂಡಿತು. ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ 27.5 ಓವರ್‌ಗಳಲ್ಲಿ 109 ರನ್‌ ಗಳಿಸಿತು. ಉದಯ್‌ ಕುಮಾರ್‌ (17) ಮತ್ತು ರಾಜೇಶ್ವರ್‌ (12) ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ರಾಯನ್‌ ಇಂಡಿಯನ್ಸ್‌ ಪರ ಭರಣೀಧರನ್‌ (14ಕ್ಕೆ 3) ಮತ್ತು ಬಿ, ಶಿವಕುಮಾರ್‌ (16 ಕ್ಕೆ 3) ಉತ್ತಮ ಬೌಲಿಂಗ್‌ ಪ್ರದರ್ಶಿಸಿದರು.

110ರನ್‌ ಜಯದ ಗುರಿಹೊತ್ತ ರಾಯಲ್‌ ಇಂಡಿಯನ್ಸ್‌ ವಿಜಯ್‌ ಆಳ್ವಾ (21ಕ್ಕೆ 3) ಮತ್ತು ಉದಯ್ ಕುಮಾರ್‌ (18ಕ್ಕೆ3) ಅವರ ಸ್ಪಿನ್‌ ದಾಳಿಗೆ ಸಿಲುಕಿ 98 ರನ್‌ಗೆ ತನ್ನೆಲ್ಲ ವಿಕೆಟ್‌ ಕಳೆದುಕೊಂಡಿತು. ರಾಯಲ್‌ ಇಂಡಿಯನ್ಸ್‌ ಪರ ಮನೀಶ್‌ ಪಚಿಸಿಯಾ 40* ರನ್‌ ಗಳಿಸಿದರೂ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ಮೊದಲ ಪಂದ್ಯದಲ್ಲಿ ಉತ್ತಮ ಬ್ಯಾಟ್ಸ್‌ಮನ್‌ ಗೌರವಕ್ಕೆ ರಾಯಲ್‌ ಇಂಡಿಯನ್ಸ್‌ ಮನೀಶ್‌ ಪಚಿಸಿಯಾ ಆಯ್ಕೆಯಾದರು. ಉತ್ತಮ ಬೌಲರ್‌ ಆಗಿ ರಾಯಲ್ ಇಂಡಿಯನ್ಸ್‌ನ ಭರಣೀಧರನ್‌ ಆಯ್ಕೆಯಾದರು.

ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ ತಂಡದ ಉದಯ್‌ ಕುಮಾರ್‌ ಬೆಸ್ಟ್‌ ಬ್ಯಾಟ್ಸ್‌ಮನ್‌, ವಿಜಯ ಆಳ್ವಾ ಬೆಸ್ಟ್‌ ಬೌಲರ್‌ ಹಾಗೂ ಶ್ರೀಧರ್‌ ಉಳ್ಳಾಲ್‌ ಆಯ್ಕೆಯಾದರು.

 

 

ಸಮಬಲಗೊಂಡ ಎರಡನೇ ಪಂದ್ಯ:

ಎರಡನೇ ದಿನದ ಪಂದ್ಯಕ್ಕೆ ಮಳೆ ಅಡ್ಡಿಯಾಗಿತ್ತು. ಇದರಿಂದಾಗಿ ಪಂದ್ಯವನ್ನು 16 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು. ಟಾಸ್‌ ಗೆದ್ದ ಬಿಎಸಿಎ-ಕೆಆರ್‌ಎಸ್‌ ಇಲೆವೆನ್‌ ತಂಡ ಫೀಲ್ಡಿಂಗ್‌ ಆಯ್ದುಕೊಂಡು, ರಾಯಲ್‌ ಇಂಡಿಯನ್ಸ್‌ ತಂಡವನ್ನು 59 ರನ್‌ಗೆ ಕಟ್ಟಿ ಹಾಕಿತು. ಆತಿಥೇಯ ತಂಡದ ಪರ ಶ್ರೀನಿವಾಸ್‌ 14 ರನ್‌ಗೆ 3  ವಿಕೆಟ್‌ ಗಳಿಸಿದರೆ, ಸಫ್ದಾರ್‌ ಅಲಿ 1 ರನ್‌ಗೆ 2 ವಿಕೆಟ್‌ ಗಳಿಸಿದರು.

ಅಲ್ಪ ಮೊತ್ತವನ್ನು ಬೆಂಬತ್ತಿದ ಬಿಎಸಿಎ-ಕೆಆರ್‌ಎಸ್‌ ನಿಗದಿತ 16 ಓವರ್‌ಗಳಲ್ಲಿ 59 ರನ್‌ ಗಳಿಸುವುದರೊಂದಿಗೆ ಪಂದ್ಯ ಸಮಬಲಗೊಂಡಿತು. ಮನೀಶ್‌ ಹಾಗೂ ರವಿ ಕುಮಾರ್‌ ತಲಾ 2 ವಿಕೆಟ್‌ ಗಳಿಸಿ ರಾಯಲ್‌ ಇಂಡಿಯನ್ಸ್‌ ಗೌರವ ಕಾಯ್ದರು.

ರಾಯಲ್‌ ಇಂಡಿಯನ್ಸ್‌ ಪರ ಉತ್ತಮ ಬ್ಯಾಟ್ಸ್‌ಮನ್‌ ಆಗಿ ಸಂದೀಪ್‌ ಅಗರ್ವಾಲ್‌ ಆಯ್ಕೆಯಾದರೆ, ಉತ್ತಮ ಬೌಲರ್‌ ಆಗಿ ಮನೀಶ್‌ ಗೌರವ ಪಡೆದರು. ಬಿಎಸಿಎ-ಕೆಆರ್‌ಎಸ್‌ ಪರ ಉತ್ತಮ ಬ್ಯಾಟ್ಸ್‌ಮನ್‌ ಆಗಿ ರಾಜು ಶೆಟ್ಟಿ ಉತ್ತಮ ಬೌಲರ್‌ ಆಗಿ ಶ್ರೀನಿವಾಸ್‌ ಹಾಗೂ ಉತ್ತಮ ಫೀಲ್ಡರ್‌ ಆಗಿ ಶ್ರೀಧರ್‌ ಉಳ್ಳಾಲ್‌ ಆಯ್ಕೆಯಾದರು.

ಬಿಎಸಿಎ-ಕೆಆರ್‌ಎಸ್‌ಗೆ ಎರಡನೇ ಜಯ:

ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯದಲ್ಲಿ ಬಿಎಸಿಎ-ಕೆಆರ್‌ಎಸ್‌ ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ದುಕೊಂಡಿತು. 20 ಓವರ್‌ಗಳ ಪಂದ್ಯದಲ್ಲಿ ರಾಯಲ್‌ ಇಂಡಿಯನ್ಸ್‌ 66 ರನ್‌ ಗಳಿಸಿತು. ಉದಯ್‌ ಕುಮಾರ್‌ 1 ರನ್‌ ನೀಡಿ ಅಮೂಲ್ಯ 3 ವಿಕೆಟ್‌ ಗಳಿಸಿದರೆ, ವಿಜಯ್‌ ಆಳ್ವಾ 12 ರನ್‌ಗೆ 2 ವಿಕೆಟ್‌ ಗಳಿಸಿ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ನಂತರ ಬಿಎಸಿಎ ಪರ ಸಫ್ದಾರ್‌ ಮತ್ತು ರಾಜೇಶ್ವರ್‌ ತಲಾ 14 ರನ್‌ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು. ರಾಯಲ್ಸ್‌ ಪರ ಗೋಪಾಲ್‌ ಉತ್ತಮ ಬೌಲಿಂಗ್‌ ಪ್ರದರ್ಶಿಸಿದರೂ ತಂಡವನ್ನು ಸೋಲಿನಿಂದ ಪಾರುಮಾಡಲಾಗಲಿಲ್ಲ. ಬಿಎಸಿಎ-ಕೆಆರ್‌ಎಸ್‌ ಇಲೆವೆಲ್‌ 4 ವಿಕೆಟ್‌ ಗಳಿಂದ ಜಯ ಗಳಿಸಿ 2-0 ಅಂತರದಲ್ಲಿ ಸರಣಿ ಗೆದ್ದುಕೊಂಡಿತು.

ಫೈನಲ್‌ ಪಂದ್ಯದಲ್ಲಿ ರಾಯಲ್‌ ಇಂಡಿಯನ್ಸ್‌ ತಂಡದ ಆಲ್ವಿನ್‌ ಫೆರ್ನಾಂಡೀಸ್‌ ಉತ್ತಮ ಬ್ಯಾಟ್ಸ್‌ಮನ್‌ ಮತ್ತು ಗೋಪಾಲ್‌ ದುದಾನಿ ಉತ್ತಮ ಬೌಲರ್‌ ಗೌರವಕ್ಕೆ ಪಾತ್ರರಾದರು. ಬಿಎಸಿಎ ಪರ ಉತ್ತಮ ಬೌಲರ್‌ ಬ್ಯಾಟ್ಸ್‌ಮನ್‌ ಆಗಿ ಸಫ್ದಾರ್‌ ಅಲಿ ಮೂಡಿ ಬಂದರು, ಬೆಸ್ಟ್‌ ಬೌಲರ್‌ ಉದಯ್‌ ಕುಮಾರ್.‌ ಸರಣಿಶ್ರೇಷ್ಠ ಗೌರವಕ್ಕೆ ಉದಯ್‌ ಕುಮಾರ್‌ ಪಾತ್ರರಾದರು,

ಎನ್‌ಇಟಿ ಕ್ಯಾಂಪಸ್‌ನ ಯೋಗೇಶ್‌ ಹೆಗ್ಡೆ, ಎನ್‌ಇಟಿ ಕ್ಯಾಂಪಸ್‌ನ ಕ್ರೀಡಾ ಆಡಳಿತಾಧಿಕಾರಿ ಶ್ಯಾಮ್‌ ಸುಂದರ್‌, ದೈಹಿಕ ಶಿಕ್ಷಣ ನಿರ್ದೇಶಕ ಗಣೇಶ್‌ ನಿಟ್ಟೆ ಹಾಗೂ ಕ್ಯುರೇಟರ್‌ ಶಶಿರಾಜ್‌ ಹೆಗ್ಡೆ ಈ ಟೂರ್ನಿಯ ಯಶಸ್ಸಿನಲ್ಲಿ ಶ್ರಮಿಸಿದ್ದಾರೆ.

ಸಾಧಕರಿಗೆ ಸನ್ಮಾನ:

ಟೂರ್ನಿಯ ಮೊದಲ ದಿನದಲ್ಲಿ ನಿಟ್ಟೆ ವಿಶ್ವವಿದ್ಯಾನಿಲಯದ ಕುಲಪತಿ ನಿಟ್ಟೆ ವಿನಯ್‌ ಹೆಗ್ಡೆ ಅವರು ಮಾಜಿ ಅಂಪೈರ್‌ ವೈ.ಎಸ್‌. ರಾವ್‌ ಅವರನ್ನು ಸನ್ಮಾನಿಸಿದರು. ಕೊನೆಯ ದಿನದಲ್ಲಿ ಬಿ.ಸಿ. ಆಳ್ವಾ ಕ್ರೀಡಾಂಗಣದ ಕ್ಯುರೇಟರ್‌ ಶಶಿರಾಜ್‌ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಅದೇ ರೀತಿ ರಾಯಲ್‌ ಇಂಡಿಯನ್ಸ್‌ ತಂಡದ ನಾಯಕ ಮುಂಬೈಯ ಹಿರಿಯ ಕ್ರಿಕೆಟಿಗ ಪ್ರದೀಪ್‌ ಗೋಡ್ಬಲೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯ ಮಾಜಿ ಮ್ಯಾನೇಜರ್‌ ಬಾಲಕೃಷ್ಣ ಪೈ ಅವರ ಕೊಡುಗೆಯನ್ನೂ ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಅಂತಿಮ ದಿನದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ತ್ರೀಶಾ ವಿದ್ಯಾ ಕಾಲೇಜು ಕಟಪಾಡಿ ಇಲ್ಲಿನ ಪ್ರಾಂಶುಪಾಲರಾದ ಪ್ರೊ. ಗುರುಪ್ರಸಾದ್‌ ರಾವ್‌ ವಿಜೇತರಿಗೆ ಬಹುಮಾನ ವಿತರಿಸಿದರು. ನವ್ಯಾ ತಂಪು ಪಾನೀಯ ಇದರ ಮಾಲೀಕರಾದ ಸುಶೀಲ್‌ ಬೋಳಾರ್‌ ಮುಖ್ಯ ಅತಿಥಿಗಳಾಗಿದ್ದರು.

Related Articles