Tuesday, April 16, 2024

ರಣಜಿ: ಕರ್ನಾಟಕಕ್ಕೆ ವೀರೋಚಿತ ಸೋಲು

ಸ್ಪೋರ್ಟ್ಸ್ ಮೇಲ್ ವರದಿ

ಬರೋಡ ವಿರುದ್ಧ ನಡೆದ ರಣಜಿ ಪಂದ್ಯದಲ್ಲಿ ಉತ್ತಮ ಹೋರಾಟದ ನಡುವೆಯೂ ಕರ್ನಾಟಕ ತಂಡ ಎರಡು ವಿಕೆಟ್ ಸೋಲನುಭವಿಸಿದೆ. 110 ರನ್ ಜಯದ ಗುರಿ ಹೊತ್ತ ಬರೋಡವನ್ನು 90 ರನ್‌ಗೆ 8 ವಿಕೆಟ್ ಉರುಳಿಸುವವರೆಗೂ ಕರ್ನಾಟಕ ಹೋರಾಟ ನೀಡಿತ್ತು. ಆದರೆ ಭಾರ್ಗವ್ ಭಟ್ ಹಾಗೂ ಅರೋತೆ ಸಿಡಿಸಿದ ಎರಡು ಸಿಕ್ಸರ್ ಪಂದ್ಯದ ಗತಿಯನ್ನೇ ಬದಲಾಯಿಸಿತು. ಇದರೊಂದಿಗೆ ಕರ್ನಾಟಕ ತಂಡ ಸೋಲಿನ ಆಘಾತ ಕಂಡಿತು.

ದ್ವಿತೀಯ ಇನಿಂಗ್ಸ್‌ನಲ್ಲಿ ಕರ್ನಾಟಕದ ಪರ ಕೆ.ವಿ. ಸಿದ್ಧಾರ್ಥ್ (64) ಹಾಗೂ ನಾಯಕ ಮನೀಶ್ ಪಾಂಡೆ (50) ಅರ್ಧ ಶತಕ ಗಳಿಸುವ ಮೂಲಕ ತಂಡ 220 ರನ್ ಗಳಿಸಿತು. ಭಾರ್ಗವ್  ಭಟ್ 116 ರನ್‌ಗೆ 5 ವಿಕೆಟ್ ಗಳಿಸಿ ಕರ್ನಾಟಕದ ರನ್ ಗಳಿಕೆಗೆ ಕಡಿವಾಣ ಹಾಕಿದರು. ಮೊದಲ ಇನಿಂಗ್ಸ್‌ನಲ್ಲೂ ಭಾರ್ಗವ್ 3 ವಿಕೆಟ್ ಗಳಿಕೆಯ ಸಾಧನೆ ಮಾಡಿದ್ದರು.
110 ರನ್ ಜಯ ಗುರಿ ಹೊತ್ತ ಬರೋಡ ತಂಡ ಕರ್ನಾಟಕದ ಸ್ಪಿನ್ ಹಾಗೂ ವೇಗದ ದಾಳಿಗೆ ಸಿಲುಕಿ ಸಂಕಷ್ಟಕ್ಕೆ ಗುರಿಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ತಾಳ್ಮೆಯ ಆಟವಾಡಿದ ಭಾರ್ಗವ್ ಹಾಗೂ ಅರೋತೆ  ಜಯ ತಂದುಕೊಟ್ಟರು.
ಕರ್ನಾಟಕ ತಂಡ ಮೊದಲ ಇನಿಂಗ್ಸ್‌ನಲ್ಲಿ 112 ರನ್‌ಗೆ ಆಲೌಟ್ ಆದಾಗಲೇ ಸೋಲಿನ ಹಾದಿಯನ್ನು ಖಚಿತಪಡಿಸಿಕೊಂಡಿತ್ತು. ನಿರೀಕ್ಷೆಯಂತೆ ಭಾರ್ಗವ್  ಭಟ್ ಪಂದ್ಯಶ್ರೇಷ್ಠರೆನಿಸಿದರು.

Related Articles