ಸಂತೋಷ್ ಟ್ರೋಫಿ ಫುಟ್ಬಾಲ್ : ಕರ್ನಾಟಕ ತಂಡಕ್ಕೆ ಜಯ
ಸ್ಪೋರ್ಟ್ಸ್ ಮೇಲ್ ವರದಿ
ಸಿಕ್ಕಿಂ ತಂಡವನ್ನು 2-0 ಗೋಲಿನಿಂದ ಸೋಲಿಸುವ ಮೂಲಕ ಕರ್ನಾಟಕ ತಂಡ 76ನೇ ಸಂತೋಷ್ ಟ್ರೋಫಿ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಮೊದಲ ಜಯ ದಾಖಲಿಸಿದೆ.
ಪಂಜಾಬ್ನ ಲುಧಿಯಾನದ ಗುರುನಾನಕ್ ಕ್ರೀಡಾಂಗಣದಲ್ಲಿ ನಡೆದ ಲೀಗ್ನ ಕೊನೆಯ ಸುತ್ತಿನ ಪಂದ್ಯದಲ್ಲಿ ಕರ್ನಾಟಕ ಪ್ರಥಮಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಆದರೆ 66ನೇ ನಿಮಿಷದಲ್ಲಿ ನಾಯಕ ವಿಘ್ನೇಶ್ ವಿಗು ಗಳಿಸಿದ ಗೋಲಿನಿಂದ ರಾಜ್ಯ ತಂಡ ಮುನ್ನಡೆ ಕಂಡಿತು. ನಂತರ 84ನೇ ನಿಮಿಷದಲ್ಲಿ ಬೆಂಗಳೂರು ಎಫ್ಸಿ ತಂಡದ ಆಟಗಾರ ನಮ್ಗಯಾಲ್ ಭುಟಿಯಾ ಗಳಿಸಿದ ಗೋಲು ತಂಡಕ್ಕೆ ಜಯವನ್ನು ಖಚಿತಪಡಿಸಿತು.
ಈ ಹಿಂದಿನ ಪಂದ್ಯದಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 2-2 ಗೋಲಿನಿಂದ ಡ್ರಾ ಸಾಧಿಸಿತ್ತು. ಸೋಮವಾರ ನಡೆಯಲಿರುವ ಗ್ರೂಪ್ನ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡ ಅಸ್ಸಾಮ್ ವಿರುದ್ಧ ಸೆಣಸಲಿದೆ.