Friday, April 19, 2024

ವಿಜಯ್ ಹಜಾರೆ ಟ್ರೋಫಿ: ಕರ್ನಾಟಕ ಪರ ರಾಹುಲ್ ಕಣಕ್ಕೆ

ದಿ ಸ್ಪೋರ್ಟ್ಸ್ ಬ್ಯೂರೋ
ಬೆಂಗಳೂರು: ಟೀಮ್ ಇಂಡಿಯಾದ ಸ್ಟಾರ್ ಓಪನರ್ ಕೆ.ಎಲ್ ರಾಹುಲ್, ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕರ್ನಾಟಕ ತಂಡದ ಪರ ಆಡಲಿದ್ದಾರೆ.
ಕರ್ನಾಟಕ ತಂಡದ ಅಭಿಯಾನ ಬುಧವಾರ ಆರಂಭವಾಗಲಿದ್ದು, ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಬರೋಡಾ ವಿರುದ್ಧ ಕರ್ನಾಟಕ ಆಡಲಿದೆ. ಟೀಮ್ ಇಂಡಿಯಾ ತಾರೆ ರಾಹುಲ್ ಆಗಮನದಿಂದ ರಾಜ್ಯ ತಂಡಕ್ಕೆ ಆನೆಬಲ ಬಂದಂತಾಗಿದೆ.
ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನಾಡಿದ್ದ ರಾಹುಲ್ ತವರಿಗೆ ವಾಪಸ್ಸಾಗಿದ್ದು, ಬುಧವಾರ ಆರಂಭವಾಗಲಿರುವ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಆಡಲಿದ್ದಾರೆ.
ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ಆರ್.ವಿನಯ್ ಕುಮಾರ್ ಕರ್ನಾಟಕ ತಂಡವನ್ನು ಮುನ್ನಡೆಸಲಿದ್ದು, ಸ್ಟಾರ್ ಬ್ಯಾಟ್ಸ್‌ಮನ್ ಕರುಣ್ ನಾಯರ್‌ಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ.
ವಿಜಯ್ ಹಜಾರೆ ಟ್ರೋಫಿಗೆ ಪ್ರಕಟಿಸಲಾದ ಕರ್ನಾಟಕ ತಂಡ: ಆರ್.ವಿನಯ್ ಕುಮಾರ್(ನಾಯಕ), ಕರುಣ್ ನಾಯರ್(ಉಪನಾಯಕ), ಕೆ.ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಆರ್.ಸಮರ್ಥ್, ಪವನ್ ದೇಶಪಾಂಡೆ, ಸಿ.ಎಂ ಗೌತಮ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಅಭಿಮನ್ಯು ಮಿಥುನ್, ಪ್ರಸಿದ್ಧ್ ಕೃಷ್ಣ, ಟಿ.ಪ್ರದೀಪ್, ಅನಿರುದ್ಧ ಜೋಶಿ, ಜೆ.ಸುಚಿತ್, ರಿತೇಶ್ ಭಟ್ಕಳ್, ಪ್ರವೀಣ್ ದುಬೆ.

Related Articles