Thursday, March 28, 2024

ಕ್ರಾಸ್‌ ಕಂಟ್ರಿ: ಮಂಗಳೂರು, ಧಾರವಾಡಕ್ಕೆ ಚಾಂಪಿಯನ್‌ ಪಟ್ಟ

sportsmail,ಬೆಂಗಳೂರು:

ಬೆಂಗಳೂರಿನ ವಿವೇಕಾನಂದ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಆಯೋಜಿಸಿದ್ದ ವಿಟಿಯು ಕ್ರಾಸ್‌ ಕಂಟ್ರಿ ಚಾಂಪಿಯನ್ಷಿಪ್ನ ಪುರುಷರ ವಿಭಾಗದಲ್ಲಿ ಮಂಗಳೂರಿನ ಎನ್‌ಎಂಎಎಂಐಟಿ, ವನಿತೆಯರ ವಿಭಾಗದಲ್ಲಿ ಧಾರವಾಡದ ಎಸ್‌ಡಿಎಂಸಿಇಟಿ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿವೆ.

ಫೆಬ್ರವರಿ ತಿಂಗಳ 27ರಂದು ನಡೆದ ಚಾಂಪಿಯನ್ಷಿಪ್‌ಗೆ ವಿಟಿಯು ಕ್ರೀಡಾ ನಿರ್ದೇಶಕರಾದ ಡಾ. ಎ.ಜಿ. ಬುಜುರ್ಕೆ ಮತ್ತು ಪ್ರಾಂಶುಪಾಲರಾದ ಡಾ. ಪದ್ಮನಾಭ ಎಸ್.‌ ಅವರು ಚಾಲನೆ ನೀಡಿದರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಸೇರಿದ ಕಾಲೇಜುಗಳಿಂದ 120 ಪುರುಷ ಹಾಗೂ 75 ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು.

ಪುರುಷರ ವಿಭಾಗದ ಫಲಿತಾಂಶ: ರಾಮನಗರದ ಸರಕಾರಿ ಎಂಜಿನಿಯರಿಂಗ್‌ ಕಾಲೇಜಿನ ರಂಗನಾಥ್‌ ಅವರು 35: 57 ನಿಮಿಷಗಳಲ್ಲಿ ಗುರಿ ತಲುಪಿ ಪ್ರಥಮ ಸ್ಥಾನ ಪಡೆದರು.

37:21 ನಿಮಿಷಗಳಲ್ಲಿ ಗುರಿ ತಲುಪಿದ ಎಸ್‌ಐಟಿಐಎಂನ ಸಂಜಯ್‌ ಕುಮಾರ್‌ ದ್ವಿತೀಯ ಸ್ಥಾನ ಗಳಿಸಿದರು, ಮಂಗಳೂರಿನ ಎನ್‌ಎಂಎಎಂಐಟಿ ಯ ರಾಜೇಂದ್ರ ಅವರು 37:42 ನಿಮಿಷಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ವನಿತೆಯರ ವಿಭಾಗದ ಫಲಿತಾಂಶ: ಧಾರವಾಡದ ಎಸ್‌ಡಿಎಂಸಿಇ ಐ ಶ್ರೀನಿಧಿ ಎಸ್‌. ಸುರ್ಗೊಂಡ್‌ 46:33 ನಿಮಿಷಗಳಲ್ಲಿ ಗುರಿ ತಲುಪಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡರು. ಬೆಳಗಾವಿಯ ವಿಟಿಯುನ ಗೀತಾ ಎನ್‌. 50:05 ನಿಮಿಷಗಳಲ್ಲಿ ಗುರಿ ತಲುಪಿ ಎರಡನೇ ಸ್ಥಾನ ಗಳಿಸಿದರು. ಬೆಂಗಳೂರಿನ ಆರ್‌ವಿಸಿ ಎಂಜಿನಿಯರಿಂಗ್‌ ಕಾಲೇಜಿನ ಸೀಮಾ ಎಸ್‌. ತೆಂಡೂಲ್ಕರ್‌ 52:38 ಸೆಕೆಂಡುಗಳಲ್ಲಿ ಗುರಿ ತಲುಪಿ ಮೂರನೇ ಸ್ಥಾನ ತಮ್ಮದಾಗಿಸಿಕೊಂಡರು.

ಪುರುಷರ ವಿಭಾಗದ ಸಮಗ್ರ ಚಾಂಪಿಯನ್‌ ಪಟ್ಟ:

24 ಅಂಕಗಳನ್ನು ಗಳಿಸಿದ ಮಂಗಳೂರಿನ ಎನ್‌ಎಂಎಎಂಐಟಿ ಸಮಗ್ರ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. 40 ಅಂಕಗಳನ್ನು ಗಳಿಸಿದ ಮಂಗಳೂರಿನ ಎಸ್‌ಐಟಿ ತಂಡ ಸಮಗ್ರ ಚಾಂಪಿಯನ್ಷಿಪ್‌ನಲ್ಲಿ ಎರಡನೇ ಸ್ಥಾನ ಗಳಿಸಿತು. ಮಂಗಳೂರಿನ ಎಐಸಿಇಟಿ 81 ಅಂಕಗಳನ್ನು ಗಳಿಸಿ ಮೂರನೇ ಸ್ಥಾನಿಯಾಯಿತು.

ವನಿತೆಯರ ವಿಭಗದ ಸಮಗ್ರ ಚಾಂಪಿಯನ್‌ ಪಟ್ಟ:

33 ಅಂಕಗಳನ್ನು ಗಳಿಸಿದ ಧಾರವಾಡದ ಎಸ್‌ಡಿಎಂಸಿಇಟಿ ತಂಡ ಸಮಗ್ರ ಚಾಂಪಿಯನ್‌ ಪಟ್ಟ ತನ್ನದಾಗಿಸಿಕೊಂಡಿತು. 55 ಅಂಕಗಳೊಂದಿಗೆ ಮಂಗಳೂರಿನ ಎನ್‌ಎಂಎಎಂಐಟಿ ದ್ವಿತೀಯ ಸ್ಥಾನಿಯಾಯಿತು. ಎಂವಿಜೆ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ 72 ಅಂಕಗಳೊಂದಿಗೆ ತೃತೀಯ ಸ್ಥಾನಿಯಾಯಿತು.

ಬಹುಮಾನ ವಿತರಣಾ ಸಮಾರಂಭದಲ್ಲಿ ವಿಟಿಯು ಕ್ರೀಡಾ ನಿರ್ದೇಶಕರಾದ ಡಾ, ಎ,ಜಿ. ಬುಜುರ್ಕೆ, ಜೆಇಎಸ್‌ನ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಎಚ್‌.ಜಿ. ಬಾಲಗೋಪಾಲ, ವಿಕೆಐಟಿಯ ಪ್ರಾಂಶುಪಾಲ ಡಾ. ಪದ್ಮನಾಭ ಎಸ್‌ ಮತ್ತು ವಿಕೆಐಟಿಯ ದೈಹಿಕ ಶಿಕ್ಷಣ ನಿರ್ದೇಶಕ ಲೋಕೆಶ್‌ ಕೆ.ಟಿ. ಪಾಲ್ಗೊಂಡಿದ್ದರು.

Related Articles