Tuesday, March 19, 2024

ತಾಂಗ್ರಿಗೆ ಸೋಲುಣಿಸಿದ ಹೂಡಾಗೆ ಚೊಚ್ಚಲ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಅಗ್ರ ಶ್ರೇಯಾಂಕಿತ ಆಟಗಾರ್ತಿ ತೆಲಂಗಾಣದ ಸಂಜನಾ ಸಿರಿಮಲ್ಲಾ ಹಾಗೂ ಹರಿಯಾಣದ ಐದನೇ ಶ್ರೇಯಾಂಕಿತ ಆಟಗಾರ ಕೃಷ್ಣ ಹೂಡಾ ರಾಷ್ಟ್ರೀಯ ಟೆನಿಸ್ ಚಾಂಪಿಯನ್‌ಷಿಪ್‌ನ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಮುಂಬೈಯ ಕ್ರಿಕೆಟ್ ಕ್ಲಬ್ ಆಫ್  ಇಂಡಿಯಾದ ಆಶ್ರಯದಲ್ಲಿ ನಡೆದ ಸಿಸಿಐ 13ನೇ ರಮೇಶ್ ದೇಸಾಯಿ ಸ್ಮಾರಕ ಅಖಿಲ ಭಾರತ 16 ವರ್ಷ ವಯೋಮಿತಿಯ ಟೆನಿಸ್ ಚಾಂಪಿಯನ್‌ಷಿಪ್ ಶನಿವಾರ ಮುಕ್ತಾಯಗೊಂಡಿತು.

16 ವರ್ಷ ವಯೋಮಿತಿಯಲ್ಲಿ ದೇಶದಲ್ಲೇ ನಂಬರ್ ಒನ್ ಸ್ಥಾನ ಪಡೆದಿರುವ ಹೈದರಾಬಾದ್ ಮೂಲದ ಸಂಜನಾ, ಹರಿಯಾಣದ ರೆನ್ನೆ ಸಿಂಗ್ ವಿರುದ್ಧ ಫೈನಲ್‌ನಲ್ಲಿ  6-3, 6-1 ಅಂತರದಲ್ಲಿ ಜಯ ಗಳಿಸಿ ಚೊಚ್ಚಲ ಪ್ರಶಸ್ತಿ ಗೆದ್ದುಕೊಂಡರು.
ಮತ್ತೊಂದು ಅಂಗಣದಲ್ಲಿ ನಡೆದ ಬಾಲಕರ ಫೈನಲ್ ಪಂದ್ಯದಲ್ಲಿ ಕೃಷ್ಣ ಮೊದಲ ಸೆಟ್‌ನಲ್ಲಿ ಸೋಲನುಭವಿಸಿದರೂ, ನಂತರ ಪುಟಿದೆದ್ದು, ಪಂಜಾಬ್‌ನ ದ್ರುವ್ ತಾಂಗ್ರಿಗೆ 3-6, 6-1, 6-4 ಅಂತರದಲ್ಲಿ ಸೋಲುಣಿಸಿ ಪ್ರಶಸ್ತಿ ಗೆದ್ದುಕೊಂಡರು.

Related Articles