Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ರಾಷ್ಟ್ರೀಯ ಖೋ ಖೋ: ಬೆಂಗಳೂರಿನ ಚಿತ್ರಕೂಟ ಶಾಲೆಗೆ ದಾಖಲೆಯ ಡಬಲ್‌ ಚಿನ್ನ!

ಬೆಂಗಳೂರು: ಶಿಕ್ಷಣದ ಜೊತೆಯಲ್ಲಿ ಕ್ರೀಡೆಗೆ ಹೆಚ್ಚಿನ ಒತ್ತು ನೀಡುವ ಶಾಲೆಗಳಲ್ಲಿ ಒಂದಾಗಿರುವ ಬೆಂಗಳೂರಿನ ಚಿತ್ರಕೂಟ ಶಾಲೆಯು 2022-23ನೇ ಸಾಲಿನ ಸಿಬಿಎಸ್‌ಇ ಶಾಲೆಗಳ ರಾಷ್ಟ್ರೀಯ ಖೋ ಖೋ ಚಾಂಪಿಯನ್‌ಷಿಪ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ.

ಚಿತ್ರಕೂಟದ ಬಾಲಕ ಹಾಗೂ ಬಾಲಕಿಯರ ಖೋ ಖೋ ತಂಡವು ಪಂಜಾಬ್‌ನಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿವೆ.

ಬಾಲಕಿಯರ ತಂಡವು ಈ ಹಿಂದೆಯೂ ಸಹ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದಲ್ಲಿ ವಿಜಯಶಾಲಿಯಾಗಿತ್ತು. ಆದರೆ ಈ ಬಾರಿ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ರಾಜ್ಯವನ್ನು ಪ್ರತಿನಿಧಿಸಿ, ಎರಡೂ ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ.

29 ಡಿಸೆಂಬರ್ 2023 ರಂದು ಪಂಜಾಬ್ ನ ಲೆಹ್ರಗಾಗ ಜಿಲ್ಲೆಯ ಡಾ. ಡಿ.ಎ.ವಿ ಪಬ್ಲಿಕ್ ಶಾಲೆಯಲ್ಲಿ ನಡೆದ ಖೋ ಖೋ ಪಂದ್ಯಾವಳಿಯಲ್ಲಿ ಎರಡೂ ವಿಭಾಗಗಳಲ್ಲಿ ಜಯಗಳಿಸಿ, ರಾಷ್ಟ್ರದ 24,000 ಸಿ.ಬಿ.ಎಸ್.ಸಿ ಶಾಲೆಗಳ ಪೈಕಿ ಈ ಸಾಧನೆ ಮಾಡಿದ ಮೊದಲ ಶಾಲೆಯಾಗಿದ್ದು ವಿಶೇಷ.

ಹಿರಿಯ ವಿರುದ್ಧ ಕಿರಿಯರ ಮೇಲುಗೈ:

19 ವರ್ಷ ವಯಸ್ಸಿನ ಕ್ರೀಡಾಳುಗಳೇ ಹೆಚ್ಚಿದ್ದ ಇತರ ರಾಜ್ಯದ ತಂಡಗಳ ವಿರುದ್ಧ 11 ರಿಂದ 16 ವರ್ಷದವರಿದ್ದ ಚಿತ್ರಕೂಟ ಶಾಲೆಯ ಕ್ರೀಡಾಳುಗಳು ಸೆಣಸಿ ಜಯಿಸಿದ್ದು ನಿಜಕ್ಕೂ ಅಸಾಧಾರಣ ಸಾಧನೆ. ಈ ಐತಿಹಾಸಿಕ ಗೆಲುವಿಗಾಗಿ ಮಕ್ಕಳು ಪ್ರತಿದಿನ ಬೆಳಗಿನ ಜಾವ 4.30ಕ್ಕೆ ದಿನವನ್ನು ಆರಂಭಿಸಿ, ತರಬೇತಿ ಪಡೆದಿದ್ದು ಪಂಜಾಬ್ ನ ವಿಪರೀತ ಚಳಿಯನ್ನು ಎದುರಿಸಲು ಸಹಕಾರಿಯಾಯಿತು.

22 ಬಾಲಕರ ಹಾಗೂ 18 ಬಾಲಕಿಯರ ತಂಡಗಳನ್ನು ಹಿಂದಿಕ್ಕಿ ಚಾಂಪಿಯನ್ ಆದ ತಂಡವನ್ನು ಹೃತ್ವಿಕ್ ಆರ್ ಗೌಡ ಹಾಗೂ ವೇದಿತ ಕೆ ಮುನ್ನಡೆಸಿದರು.

ಪಂಜಾಬ್ ನ ಡಾ. ದೇವರಾಜ್ ಡಿ.ಎ.ವಿ ಪಬ್ಲಿಕ್ ಶಾಲೆಯ ಕಾರ್ಯದರ್ಶಿಗಳಾದ ಪ್ರವೀಣ್ ಖೋಖರ್ ಮತ್ತು ಸಿ.ಬಿ.ಎಸ್.ಇ ಸದಸ್ಯರಾದ ಸಂಜಯ್ ಗಾಂಧಿರವರು ಮಕ್ಕಳಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಗೆದ್ದ ಬಾಲಕಿಯರ ತಂಡ-

ದಿಶಾ.ಕೆ, ಚಿನ್ಮಯಿ ಎಂ ಕುಮಾರ್, ಸುಶ್ರುತಾ ಎಂ ಎಸ್, ಧನ್ಯತಾ ಜನಾರ್ದನ್, ಸುಕೃತಿ  ಸಾಗರ್, ಉನ್ನತಿ ಬಿ ಹೊಸಮನಿ, ಪ್ರಗತಿ ಪ್ರಶಾಂತ್ ದೇಸಾಯಿ, ವಂಶಿಕಾ ಕೆ, ಜಾಹ್ನವಿ ವೈ, ಮಾನ್ಯ ವಿ, ಸುದೀಪ್ತಿ ಸಾಗರ್, ವೇದಿತ ಕೆ.

ಪ್ರಶಸ್ತಿ ಗೆದ್ದ ಬಾಲಕರ ತಂಡ –

ಸಹಜ್ ಎಸ್, ಗೌತಮ್ ಗೌಡ ಪಿ, ಯಶಸ್ ಎನ್ ಗೌಡ, ಪವನ್ ತನಯ್ ಜೆ, ಆರ್ಯನ್ ಸಿ ಕೆ, ಅಶ್ವಿನ್ ಜಿ, ಮೋಹಿತ್ ಜಿ, ಪ್ರಣವ್ ಆರ್, ಅಚಿಂತ್ಯ ಎಸ್ ಕಷ್ಯಪ್, ಭಾರ್ಗವ್ ಡಿ, ಪವನ್ ಗೌಡ ಪಿ, ಋತ್ವಿಕ್ ಆರ್ ಗೌಡ.

ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಚೈತನ್ಯರವರು ಈ ಗೆಲುವಿನ ಶ್ರೇಯವನ್ನು ದೈಹಿಕ ಶಿಕ್ಷಣ ಶಿಕ್ಷಕರಾದ ರಂಗನಾಥ್ ಮತ್ತು  ಸಂಗೀತಾ, ಕ್ರೀಡಾ ಸಂಯೋಜಕಿ ಅನಿತಾ ರೈ, ಪ್ರಾಂಶುಪಾಲರಾದ  ಜೋಯಿತಾ ಚಟರ್ಜಿ ಮತ್ತು ಮಕ್ಕಳ ಪೋಷಕರಿಗೆ  ಅರ್ಪಿಸಿದ್ದಾರೆ.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.