Friday, March 29, 2024

ಬೆಂಗಳೂರು ಬ್ಲಾಸ್ಟರ್ಸ್‌ಗೆ ರೋಚಕ ಜಯ

ಸ್ಪೋರ್ಟ್ಸ್ ಮೇಲ್ ವರದಿ 

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕರ್ನಾಟಕ ಪ್ರೀಮಿಯರ್ ಲೀಗ್‌ನ ಮೂರನೇ ದಿನದ ಪಂದ್ಯದಲ್ಲಿ ಆತಿಥೇಯ ಬೆಂಗಳೂರು ಬ್ಲಾಸ್ಟರ್ಸ್ ತಂಡ ಬಳ್ಳಾರಿ ಟಸ್ಕರ್ಸ್ ವಿರುದ್ಧ ರೋಚಕ 6 ರನ್‌ಗಳ ಜಯ ಗಳಿಸಿದೆ.

ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ತಂಡ ಒಂದು ಹಂತದಲ್ಲಿ  11 ಓವರ್‌ಗಳಲ್ಲಿ  ಕೇವಲ 67 ರನ್‌ಗಳಿಸಿ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ ಅರ್ಶದೀಪ್ ಸಿಂಗ್ ಗಳಿಸಿದ ಸ್ಫೋಟಕ 67 ರನ್‌ಗಳ ನೆರವಿನಿಂದ ರಾಬಿನ್ ಉತ್ತಪ್ಪ ಪಡೆ 8 ವಿಕೆಟ್ ನಷ್ಟಕ್ಕೆ 167 ರನ್ ಗಳಿಸಿತು. ಹುಬ್ಬಳ್ಳಿ ಟಸ್ಕರ್ಸ್ ತಂಡ ರೋಹನ್ ಕದಮ್ (31) ಹಾಗೂ ಅಭಿನವ್ ಮನೋಹರ್ (61) ಅವರ ಬ್ಯಾಟಿಂಗ್ ನೆರವಿನಿಂದ ಜಯದ ಹಾದಿಯನ್ನು ಸುಗಮವಾಗಿರಿಸಿಕೊಂಡಿತ್ತು. ಆದರೆ ಕೊನೆಯ 8 ಎಸೆತಗಳಲ್ಲಿ   15 ರನ್ ಗಳಿಸಬೇಕಾಗಿದ್ದಾಗ ಕೇವಲ9 ರನ್‌ಗಳಿಸಿ ಸೋಲಿನ ಕಹಿಯುಂಡಿತು.
ಬೆಂಗಳೂರು ತಂಡ ಅಲ್ಪ ಮೊತ್ತಕ್ಕೆ ಆಲೌಟ್ ಆಗುವ ಲಕ್ಷಣ ತೋರಿತ್ತು. ಆದರೆ 7ನೇ ಕ್ರಮಾಂಕದಲ್ಲಿ ಅಂಗಣಕ್ಕಿಳಿದ ಆರ್ಶದೀಪ್ ಸಿಂಗ್ 1 ಬೌಂಡರಿ ಹಾಗೂ 8 ಸಿಕ್ಸರ್ ನೆರವಿನಿಂದ 67 ರನ್ ಗಳಿಸಿ ತಂಡದ ಸವಾಲಿನ ಮೊತ್ತಕ್ಕೆ ನೆರವಾದರು. ಭರತ್ ದೇವರಾಜ್ (19) ಕೂಡ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ಚೇತನ್ ವಿಲಿಯಮ್ಸ್ 22 ರನ್ ಗಳಿಸಿ ತಂಡಕ್ಕೆ ನೆರವಾದರು. ಮನೋಹರ್ ಬಳ್ಳಾರಿಗೆ ಜಯದ ಹಾದಿಯನ್ನು ಸುಗಮಗೊಳಿಸಿದ್ದರು. ಅಭಿನವ್ ಮನೋಹರ್ ನಿರಂತರ ಸಿಕ್ಸರ್ ಸಿಡಿಸಿ 61 ರನ್‌ಗಳಿಸಿದಾಗ ಟಸ್ಕರ್ಸ್ ಜಯದ ಹಾದಿ ಸುಲಭವಾಗಿತ್ತು.  ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಿಡಿಸಿದ ಮನೋಹರ್ 19ನೇ ಓವರ್‌ನಲ್ಲಿ ವಿಕೆಟ್ ಕಳೆದುಕೊಂಡರು.
ಸಂಕ್ಷಿಪ್ತ ಸ್ಕೋರ್
ಬೆಂಗಳೂರು ಬ್ಲಾಸ್ಟರ್ಸ್
20 ಓವರ್‌ಗಳಲ್ಲಿ 8 ವಿಕೆಟ್‌ಗೆ 167 (ಆರ್ಶದೀಪ್ ಸಿಂಗ್ ಬ್ರಾರ್ 67, ಚೇತನ್ ವಿಲಿಯಮ್ಸ್  22, ಟಿ ಪ್ರದೀಪ್ 24ಕ್ಕೆ2)
ಬಳ್ಳಾರಿ ಟಸ್ಕರ್ಸ್ 
20 ಓವರ್‌ಗಳಲ್ಲಿ  8 ವಿಕೆಟ್‌ಗೆ 161
(ರೋಹನ್ ಕದಮ್  31, ಅಭಿನವ್ ಮನೋಹರ್ 61, ಅಬ್ರಾರ್ ಕಾಜಿ 22, ವಿ. ಕೌಶಿಕ್ 20ಕ್ಕೆ 2, ಮನೋಜ್  36ಕ್ಕೆ 3, ಭರತ್ ದೇವರಾಜ್ 25ಕ್ಕೆ 2

Related Articles