ಹೆಣಗಳ ಮೇಲೆ ಆರ್ಸಿಬಿ ಟ್ರೋಫಿಯ ಮೆರವಣಿಗೆ!
ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಗೆದ್ದ ಪ್ರಶಸ್ತಿಯ ಮೆರವಣಿಗೆ ವೇಳೆ 11 ಜನರು ಸಾವಿಗೀಡಾಗಿ 47 ಜನರು ಗಾಯಗೊಂಡಿದ್ದು ದುರದೃಷ್ಟಕರ. ಇಂಥದೊಂದು ಘಟನೆ ನಡೆಯಬಾರದಾಗಿತ್ತು. ಆದರೆ ಸಂಭವಿಸಿದೆ. ಇದಕ್ಕೆ ಯಾರು ಹೊಣೆ? ಸಂಭ್ರಮದಲ್ಲಿ ತೆಲುತ್ತಿದ್ದ ವಿಜಯೋತ್ಸವ ಇದ್ದಕ್ಕಿದ್ದಂತೆ ದುರಂತದ ಮೆರವಣಿಗೆ ಆಗಲು ಕಾರಣವೇನು.? At least 11 people have died while several have been injured in RCB victory parade stampede.
18 ವರ್ಷಗಳ ಬಳಿಕ ಆರ್ಸಿಬಿ ತಂಡ ಪ್ರಶಸ್ತಿ ಗೆದ್ದಿದೆ. ಈ ಸಂಭ್ರಮವನ್ನು ದೇಶದಾದ್ಯಂತ ಆಚರಿಸಲಾಗಿತ್ತು. ಆದರೆ ಕರ್ನಾಟಕ ಸರಕಾರ ಅದೇನೋ ವಿಶ್ವಕಪ್ ಗೆದ್ದಂತೆ ತಂಡವನ್ನು ವಿಧಾನಸೌಧಕ್ಕೆ ಕರೆಸಿ ಮೆರವಣಿಗೆಗೆ ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದಕ್ಕೆ ಪೂರಕವಾದ ಸಿದ್ಧಂತೆಯನ್ನು ಮಾಡಬೇಕಾಗಿತ್ತು. ನಾವು ಹಲವಾರು ಕಾರಣಗಳನ್ನು ಸಮರ್ಥನೆಗಾಗಿ ನೀಡಬಹುದು. ಆದರೆ ಇಲ್ಲಿ ಸರಕಾರದ ವೈಫಲ್ಯ ಎದ್ದು ಕಾಣುತ್ತಿದೆ. ಆತುರದಲ್ಲಿ ವಿಜಯೋತ್ಸವಕ್ಕೆ ಅವಕಾಶ ಮಾಡಿಕೊಡಬಾರದಿತ್ತು. ಅಭಿಮಾನಿಗಳು ಜಯದ ಅಮಲಿನಲ್ಲಿ ಇರುವಾಗ ವಿಜಯೋತ್ಸವಕ್ಕೆ ಅವಕಾಶ ಮಾಡಿಕೊಟ್ಟಿರುವುದು, ಮಾತ್ರವಲ್ಲ ಜವಾಬ್ದಾರಿಯುತ ಸ್ಥಾನದಲ್ಲಿ ಇರುವವರು ಸಾಮಾಜಿಕ ಜಾಲತಾಣಗಣಲ್ಲಿ ಚಿತ್ರ ಹಾಗೂ ನಿಲುವುಗಳನ್ನು ವ್ಯಕ್ತಪಡಿಸುವ ಕೆಲಸ ಮಾಡಬಾರದಾಗಿತ್ತು. ಎಂದಾದರೂ ಕರ್ನಾಟಕ ರಣಜಿ ತಂಡ ಪ್ರಶಸ್ತಿ ಗೆದ್ದಾಗ ಈ ರೀತಿಯ ಮೆರವಣಿಗೆ ನಡೆಸಿದ ಉದಾಹರಣೆ ಇದೆಯೇ?
ಐಪಿಎಲ್ ಜಯ ಎಂಬುದು ಒಂದು ಅಂತಾರಾಷ್ಟ್ರೀಯ ಸಾಧನೆಯಲ್ಲ. ಅದು ಒಂದು ದೇಶೀಯ ಲೀಗ್ ಪಂದ್ಯ. ಅದರಲ್ಲಿ ಹಣ ಇರುವುದರಿಂದ ಹೆಚ್ಚು ಜನಪ್ರಿಯವಾಗಿದೆ. ಆರ್ಸಿಬಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಫಾಲೋವರ್ಸ್ ಹೊಂದಿರುವ ಕ್ಲಬ್ಗಳಲ್ಲಿ ಒಂದು. ಭಾರತದಲ್ಲಂತೂ ನಂಬರ್ ಒನ್. ಇಂಥ ತಂಡದ ಸಂಭ್ರಮದಲ್ಲಿ ಜನ ಸಾಮಾನ್ಯರು ಅಪಾರ ಸಂಖ್ಯೆಯಲ್ಲಿ ಪಾಲ್ಗೊಳ್ಳುತ್ತಾರೆ. ಅದಕ್ಕೆ ಸೂಕ್ತವಾದ ಸ್ಥಳ, ಸಮಯ ಇವುಗಳ ಬಗ್ಗೆ ಅರಿವು ಅಗತ್ಯ.
ಐಪಿಎಲ್ನಿಂದಾಗಿ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಬೆಟ್ಟಿಂಗ್ನ ಮಾಯಾ ಜಾಲವೇ ಈ ಲೀಗ್ನ್ನು ಆವರಿಸಿದೆ. ಇದಕ್ಕೆ ಸರಕಾರ ಹೆಚ್ಚಿನ ಪ್ರಾಮುಖ್ಯತೆ ನೀಡಬಾರದಾಗಿತ್ತು.
ಈ ಬಗ್ಗೆ ಯಾರೂ ರಾಜಕೀಯ ಮಾಡಬೇಡಿ ಎಂದು ಹೇಳಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.
ಕ್ರಿಕೆಟ್ಗೆ ಕೊಡುತ್ತಿರುವ ಪ್ರಾಮುಖ್ಯತೆಯನ್ನು ಇತರ ಕ್ರೀಡೆಗಳಿಗೆ ಕೊಡುವುದು ಅನಿವಾರ್ಯವಾಗಿದೆ. ಸರಕಾರ ಇದೊಂದು ಪಾಠ ಎಂದು ಅರಿಯಬೇಕಾಗಿದೆ. ಜನ ಸೇರುವುದು ಮತ್ತು ಸೇರಿಸುವುದು ಯಾವತ್ತೂ ಯಶಸ್ಸಿನ ಸಂಕೇತವಲ್ಲ.