Saturday, July 27, 2024

ಡಕಾರ್ ರಾಲಿ: ಪೆರುವಿನಲ್ಲಿ ಇತಿಹಾಸ ಬರೆದ ಉಡುಪಿಯ ಕೆಪಿ ಅರವಿಂದ್

ಸ್ಪೋರ್ಟ್ಸ್ ಮೇಲ್ ವರದಿ

ಜಗತ್ತಿನ ಅತ್ಯಂತ ಅಪಾಯಕಾರಿ ಡಕಾರ್ ಆರಂಭವಾದಾಗಿನಿಂದ ಇದುವರೆಗೂ ರ‌್ಯಾಲಿಪಟುಗಳು ಹಾಗೂ ಪ್ರೇಕ್ಷಕರು ಸೇರಿದಂತೆ 70 ಮಂದಿ ದಾರುಣ ಸಾವನ್ನಪ್ಪಿದ್ದಾರೆ.

ಆ ರ‌್ಯಾಲಿಯಲ್ಲಿ ಪಾಲ್ಗೊಳ್ಳಲು ಹೆತ್ತವರು ತಮ್ಮ ಮಕ್ಕಳನ್ನು ಕಳುಹಿಸಲು ಮನಸ್ಸೇ ಮಾಡುವುದಿಲ್ಲ. ಆದರೂ ಈ ಬಾರಿಯ ರಾಲಿಯಲ್ಲಿ ಪಾಲ್ಗೊಂಡ ಉಡುಪಿಯ ಕೆ.ಪಿ. ಅರವಿಂದ್ ರ‌್ಯಾಲಿಯನ್ನು ಪೂರ್ಣಗೊಳಿಸಿ 37ನೇ ಸ್ಥಾನ ಪಡೆದಿದ್ದಾರೆ. ಈ ಬಾರಿಯ ರಾಲಿಯಲ್ಲಿ ಈ ಸಾಧನೆ ಮಾಡಿದ ಮೊದಲ ಹಾಗೂ ಒಟ್ಟಾರೆ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ರ‌್ಯಾಲಿಯಲ್ಲಿ ಬೆನ್ನು ಮೂಳೆ ಮುರಿದರೂ ಮನೆಯವರಿಗೆ ವಿಷಯ ತಿಳಿಸದೆ ಒಂದು ವರ್ಷ ಆಸ್ಪತ್ರೆಯಲ್ಲೇ ಕಳೆದಿದ್ದ ಅರವಿಂದ್ ಕಳೆದ ವರ್ಷದ ರ‌್ಯಾಲಿಯಲ್ಲಿ ಅಪಘಾತ ಸಂಭವಿಸಿ ಕೈ ಮುರಿದುಕೊಂಡು ಹಿಂದೆ ಸರಿದಿದ್ದರು. ಆದರೆ ಈ ಬಾರಿಯ ರ‌್ಯಾಲಿಯನ್ನು ಪೂರ್ಣಗೊಳಿಸಿ ತಾವು ಪ್ರತಿನಿಧಿಸಿದ್ದ ಶೆರ್ಕೋ ಟಿವಿಎಸ್ ತಂಡದ ಗೌರವವನ್ನು ಕಾಪಾಡಿದ್ದಾರೆ.
ಪೆರು, ಅರ್ಜೆಂಟೀನಾ ಹಾಗೂ ಬೊಲಿವಿಯಾ ಸೇರಿದಂತೆ ಮೂರು ರಾಷ್ಟ್ರಗಳನ್ನು ಒಳಗೊಂಡ ಈ ರ‌್ಯಾಲಿ 5,598 ಕಿ.ಮೀ. ಹಾಗೂ 2945 ಕಿ.ಮೀ. ವಿಶೇಷ ಹಂತಗಳನ್ನು ಹೊಂದಿರುತ್ತದೆ. 10 ಹಂತಗಳಲ್ಲಿ ನಡೆಯುವ ಈ ರ‌್ಯಾಲಿ ಜನವರಿ 6 ರಿಂದ ಆರಂಭಗೊಂಡು ಜನವರಿ 17ರಂದು ಕೊನೆಗೊಂಡಿತು.
ಹೀರೋ ತಂಡದಲ್ಲಿ ಭಾರತದ ಇನ್ನೋರ್ವ ಸ್ಪರ್ಧಿ ಸಂತೋಷ್ ಸಿ.ಎಸ್. ಅಪಘಾತದಲ್ಲಿ ಗಾಯಗೊಂಡ ಕಾರಣ ಅರ್ಧದಲ್ಲೇ ಸ್ಪರ್ಧೆಯಿಂದ ಹಿಂದೆ ಸರಿದಿದ್ದರು, 2015ರ ರ‌್ಯಾಲಿಯಲ್ಲಿ ಸಂತೋಷ್ 36ನೇಸ್ಥಾನ ಪಡೆದು ಈ ಸಾಧನೆ ಮಾಡಿದ ಭಾರತದ ಮೊದಲ ರ‌್ಯಾಲಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
ಗುರುವಾರ ಅಂತ್ಯಗೊಂಡ ರ‌್ಯಾಲಿಯ 10ನೇ ಹಂತದಲ್ಲಿ ಶೆರ್ಕೋ ಟಿವಿಎಸ್ ತಂಡದ ಸ್ಪರ್ಧಿ ಅರವಿಂದ್ ಗುರಿ ತಲುಪಿ ಐತಿಹಾಸಿಕ ಸಾಧನೆ ಮಾಡಿದರು. ಗಾಯದ ಸಮಸ್ಯೆ ಇದ್ದ ಕಾರಣ ಅರವಿಂದ್ ಪಾಲ್ಗೊಳ್ಳುವುದು ಸಂಶಯವಾಗಿತ್ತು. ಆದರೆ ಅಂತಿಮ ಹಂತದಲ್ಲಿ ಅವರ ಆಯ್ಕೆ ನಡೆದಿತ್ತು. 2017 ಹಾಗೂ 2018ರಲ್ಲಿ ಅರವಿಂದ್ ಯಶಸ್ಸು ಕಾಣುವಲ್ಲಿ ವಿಲರಾಗಿದ್ದರು.
ಪೆರುವಿನ ಲಿಮಾದಿಂದ ಪಿಸ್ಕೊ ನಡುವಿನ 86 ಕಿ.ಮೀ. ವಿಶೇಷ ಅಂತರವನ್ನು ಅತ್ಯಂತ ವೇಗದಲ್ಲಿ ಪೂರ್ಣಗೊಳಿಸಿದ 42ನೇ ರ‌್ಯಾಲಿಪಟು ಎಂಬ ಹೆಗ್ಗಳಿಕೆಗೆ ಅರವಿಂದ್ ಪಾತ್ರರಾದರು. ರ‌್ಯಾಲಿಯ ಬೈಕ್ ವಿಭಾಗದಲ್ಲಿ ಜಗತ್ತಿನ 138 ಸ್ಪರ್ಧಿಗಳು ಪಾಲ್ಗೊಂಡಿದ್ದರು.

Related Articles