Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಮೊದಲ ಸ್ಥಾನಕ್ಕೆ ಕೊನೆಯ ಹೋರಾಟ

ಸ್ಪೋರ್ಟ್ಸ್ ಮೇಲ್ ವರದಿ 

ಎಫ್ ಸಿ  ಗೋವಾ ತಂಡ ಸದ್ಯ ಇಂಡಿಯನ್ ಸೂಪರ್ ಲೀಗ್‌ನ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ತಲುಪಿರಬಹುದು, ಆದರೆ ಈ ಅಗ್ರ ಸ್ಥಾನ ಎಷ್ಟು ಶಾಶ್ವತ ಎಂಬುದು ಗುರುವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯದಲ್ಲಿ ತೀರ್ಮಾನವಾಗಲಿದೆ.

ಬೆಂಗಳೂರು ತಂಡದ ವಿರುದ್ಧ  ಗೋವಾ ವಿರುದ್ಧ ಮೂರು ಅಂಕ ಗಳಿಸಿದರೆ, ಅಗ್ರ ಸ್ಥಾನ ತಲುಪಲಿದೆ. ಆದರೆ ಸರ್ಗಿಯೋ ಲೊಬೆರಾ ಪಡೆ ಪ್ಲೇ ಆಫ್  ಹಂತ ತಲುಪಿದ ನಂತರ ಉಳಿದಿರುವ ಎರಡು ಪಂದ್ಯಗಳಲ್ಲಿ ಎದುರಾಳಿ ತಂಡಕ್ಕೆ ಅಂಕ ನೀಡದಿರುವ ಗುರಿ ಹೊಂದಿದೆ. ಸತತ ಆರು ಪಂದ್ಯಗಳಲ್ಲಿ ಸೋಲರಿಯದ ಗೋವಾ ತಂಡ ಅತ್ಯಂತ ಆತ್ಮವಿಶ್ವಾಸದಲ್ಲಿ ಬೆಂಗಳೂರಿಗೆ ಆಗಮಿಸಿದೆ. ಅಲ್ಲದೆ ಕಳೆದ ಐದು ಪಂದ್ಯಗಳಲ್ಲಿ ಗೋವಾ ಎದುರಾಳಿ ತಂಡಕ್ಕೆ ಗೋಲು ಗಳಿಸುವ ಅವಕಾಶ ನೀಡಿರಲಿಲ್ಲ. ಆರಂಭದಿಂದಲೂ ಸಂಘಟಿತ ಹೋರಾಟ ನೀಡುತ್ತಿರರುವ ಗೋವಾ ಅದೇ ಲಯವನ್ನು ಕಾಯ್ದುಕೊಂಡಿದೆ.
ಆಕ್ರಮಣಕಾರಿ ಆಟದಲ್ಲಿ ಗೋವಾ ಈ ಋತುವಿನಲ್ಲಿ ಇದುವರೆಗೂ ಉತ್ತಮ ದಾಖಲೆಯನ್ನು ಹೊಂದಿದೆ. 35 ಗೋಲುಗಳನ್ನು ಗಳಿಸಿದೆ. ಅದೇ ರೀತಿ ಡಿಫೆನ್ಸ್‌ನಲ್ಲೂ ಉತ್ತಮ ನಿಯಂತ್ರಣವನ್ನು ಕಾಯ್ದುಕೊಂಡಿದೆ. ಮೌರ್ತದಾ ಫಾಲ್ ಹಾಗೂ ಕಾರ್ಲೋಸ್ ಪೆನಾ ಅವರು ಗೋವಾದ ಡಿಫೆನ್ಸ್ ವಿಭಾಗದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
‘ಡಿಫೆನ್ಸ್ ವಿಭಾಗದಲ್ಲಿ ನಾವು ಉತ್ತಮ ರೀತಿಯಲ್ಲಿ ಸುಧಾರಣೆ ಕಂಡಿದ್ದೇವೆ. ಇದು ನಾವು ಋತು ಆರಂಭಕ್ಕೆ ಮುನ್ನವೇ ಹಾಕಿಕೊಂಡ ಗುರಿ. ಆ ಬಗ್ಗೆ ನನಗೆ ಖುಷಿ ಇದೆ. ಡಿಫೆನ್ಸ್ ವಿಭಾಗದಲ್ಲಿ ಸುಧಾರಣೆ ಕಂಡುಕೊಳ್ಳುತ್ತಿದ್ದಂತೆ ಗೋಲ್‌ಕೀಪ್ ಅಥವಾ ಡಿಫೆಂಡರ್ಗಳನ್ನು ನೋಡುತ್ತಿವೆ. ಆದರೆ ನಮ್ಮ ಇಡೀ ತಂಡವೇ ಡಿಫೆನ್ಸ್‌ನಲ್ಲಿ ಸುಧಾರಣೆ ಕಂಡಿದೆ. ಆದ್ದರಿಂದ ನಾವು ಕಾರ್ಯನಿರ್ವಹಹಿಸುತ್ತಿರುವ ರೀತಿಯ ಬಗ್ಗೆ ಮೆಚ್ಚುಗೆ ಇದೆ. ಅದೇ ರೀತಿ ಸಂಘಟಿತ ಹೋರಾಟದ ಬಗ್ಗೆ ಖುಷಿ ಇದೆ, ‘ ಎಂದು ಲೊಬೆರಾ ಹೇಳಿದ್ದಾರೆ.
ಗೋವಾ ಸಂಘಟಿತವಾಗಿ ಆಕ್ರಮಣಕಾರಿ ಆಟವಾಡುವ ತಂಡವಾಗಿದೆ.  ಬೆಂಗಳೂರು ತಂಡದ ವಿರುದ್ದ  ಗೋವಾ ಯಾವಾಗಲೂ ಉತ್ತಮವಾಗಿಯೇ ಆಡುತ್ತದೆ. ಅದು ಈಗಿನ ಸ್ಥಿತಿಯಲ್ಲಿ ಬೆಂಗಳೂರು ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ತೋರುತ್ತಿಲ್ಲ. ಕಳೆದ ಐದು ಪಂದ್ಯಗಳಲ್ಲಿ ಬೆಂಗಳೂರು ತಂಡ ಗೆದ್ದಿರುವುದು ಒಂದು ಪಂದ್ಯದಲ್ಲಿ ಮಾತ್ರ. ಋತುವಿನ ಆರಂಭದಲ್ಲಿ  ತೋರಿದ ಉತ್ತಮ ಪ್ರದರ್ಶನವೇ ಬೆಂಗಳೂರು ತಂಡವನ್ನು ಪ್ಲೇ ಆಫ್  ಹಂತ ತಲಪುವಂತೆ ಮಾಡಿದೆ. ಬೆಂಗಳೂರು ತಂಡ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದರೂ ಆ ಸ್ಥಾನ ಮಾತ್ರ ಈಗ ಕ್ವಾಡ್ರಾಟ್ ಪಡೆಗೆ ಅತಂತ್ರವೆನಿಸಿದೆ.
ಪ್ಲೇ ಆಫ್  ಹಂತಕ್ಕೆ ತೇರ್ಗಡೆಯಾದ ನಂತರ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೆಚ್ಚಿನ ಆಟಗಾರರಿಗೆ ವಿಶ್ರಾಂತಿ ನೀಡುತ್ತಿದ್ದಾರೆ. ಇದು ಪ್ಲೇ ಆಫ್ ನಲ್ಲಿ ಉತ್ತಮ ಪ್ರದರ್ಶನ ತೋರುವ ಗುರಿ ಇದ್ದಿರಬಹುದು. ಆದರೆ ಈ ಬದಲಾವಣೆ ತಂಡದ ಜಯದ ಲಯವನ್ನು ಕಸಿದುಕೊಳ್ಳುವಂತೆ  ಮಾಡಿತು. ಸರಳವಾಗಿ ಆಟವಾಡಿ ಸುಲಭದಲ್ಲಿ ಗೋಲು ಗಳಿಸುವ ತಂಡ ಗೋವಾದ ವಿರುದ್ಧ ಜಯದ ಲಯ ಕಂಡುಕೊಳ್ಳುವುದು ಬೆಂಗಳೂರು ತಂಡದ ಗುರಿಯಾಗಿದೆ. ಗಾಯದಿಂದ ಚೇತರಿಸಿಕೊಂಡ ನಂತರ ಬೆಂಗಳೂರು ತಂಡವನ್ನು ಸೇರಿದ ಮಿಕು ಇದುವರೆಗೂ ಗೋಲು ಗಳಿಸಿರಲಿಲ್ಲ.
‘ಮಿಕು ಋತುವಿನ ಆರಂಭದಲ್ಲಿ ಆಡಿದ ರೀತಿಯಲ್ಲಿ ಆಡುತ್ತಿಲ್ಲ. ಮತ್ತೆ ಲಯ ಕಂಡುಕೊಳ್ಳಲು ಯತ್ನಿಸುತ್ತಿದ್ದಾರೆ. ಅವರ ಆಟ, ಗಳಿಸಿದ ಗೋಲು ಹಾಗೂ ಪ್ರದರ್ಶನವನ್ನು ಗಮನಿಸಿದಾಗ ಅದು ಸ್ಪಷ್ಟವಾಗುತ್ತದೆ. ಗಾಯಕ್ಕೆ ಮುನ್ನು ಅವರು ಉತ್ತಮವಾಗಿ ಆಡಿದ್ದರು. ಮುಂದಿನ ಎರಡು ವಾರಗಳಲ್ಲಿ ನಾವು ಮತ್ತೆ ಲಯ ಕಂಡುಕೊಳ್ಳುತ್ತೇವೆಂಬ ನಂಬಿಕೆ ಇದೆ, ‘ ಎಂದು ಕ್ವಾಡ್ರಾಟ್ ಹೇಳಿದ್ದಾರೆ.

administrator