Saturday, July 27, 2024

ಎಟಿಕೆ ಮೋಹನ್ ಬಾಗನ್ ತಂಡದ ಜಯದ ಆರಂಭ

ಗೋವಾ, ನವೆಂಬರ್, 20, 2020

ರಾಯ್ ಕೃಷ್ಣ ಅವರು 67ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಎಟಿಕೆ ಮೋಹನ್ ಬಾಗನ್ ತಂಡ ಹೀರೋ ಇಂಡಿಯನ್ ಸೂಪರ್ ಲೀಗ್ ನ 7ನೇ ಅವೃತ್ತಿಯ ಮೊದಲ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್ ವಿರುದ್ಧ 1-0 ಗೋಲಿನಿಂದ ಜಯ ಗಳಿಸಿ ಶುಭಾರಂಭ ಕಂಡಿದೆ. ಮೊದಲಾರ್ಧದಲ್ಲಿ ಗೋಲು ಗಳಿಸುವಲ್ಲಿ ವಿಫಲರಾದರೂ ಆತ್ಮಸ್ಥೈರ್ಯ ಕಳೆದುಕೊಳ್ಳದ ರಾಯ್ ಕೃಷ್ಣ ಪಂದ್ಯದ ಮೇಲೆ ಹಿಡಿತ ಸಾಧಿಸುವಲ್ಲಿ ಯಶಸ್ವಿಯಾದರು. ಮೊದಲಾರ್ಧದ 37ನೇ ನಿಮಿಷದಲ್ಲಿ ಕೃಷ್ಣ ಅವಕಾಶದಿಂದ ವಂಚಿತರಾಗಿದ್ದರು. ದ್ವಿತಿಯಾರ್ಧದಲ್ಲಿ ಕೇರಳ ಬ್ಲಾಸ್ಟರ್ಸ್ ತಂಡ ಆಕ್ರಮಣಕಾರಿ ಆಟ ಪ್ರದರ್ಶಿಸಿ ಆತ್ಮವಿಶ್ವಾಸ ಮೂಡಿಸಿತ್ತು, ಆದರೆ ಗೋಲ್ ಗಳಿಸುವ ಅವಕಾಶ ಸಿಗಲಿಲ್ಲ.

 

ಗೋಲಿಲ್ಲದ ಪ್ರಥಮಾರ್ಧ

ಕೇರಳ ಬ್ಲಾಸ್ಟರ್ಸ್ ತಂಡ ಹೆಚ್ಚು ಸಮಯ ಚೆಂಡಿನ ಮೇಲೆ ನಿಯಂತ್ರಣ ಸಾಧಿಸಿದ್ದರೂ ಗೋಲು ಗಳಿಸುವಲ್ಲಿ ವಿಫಲವಾಗಿತ್ತು. ಎರಡು ಉತ್ತಮ ಅವಕಾಶಗಳನ್ನು ಕೈಚೆಲ್ಲಿದ ತಂಡ ಗೋಲು ಗಳಿಸುವುದರಿಂದ ವಂಚಿತವಾಯಿತು. ರಾಯ್ ಕೃಷ್ಣ ಅವರಿಗೆ 37ನೇ ನಿಮಿಷದಲ್ಲಿ ಸ್ವಲ್ಪ ಹೊತ್ತು ತಾಳ್ಮೆ ವಹಿಸಿರುತ್ತಿದ್ದರೆ ಸಿಕ್ಕ ಅವಕಾಶವನ್ನು ಗೋಲಾಗಿ ಪರಿವರ್ತಿಸಬಹುದಾಗಿತ್ತು. ಆದರೆ ಗಡಿಬಿಡಿಯಲ್ಲಿ ತುಳಿದ ಚೆಂಡು ಗೋಲ್ ಬಾಕ್ಸ್ ನ ನೇರಕ್ಕೆ ಸಾಗಿದರೂ ಬಹಳ ಎತ್ತರದಿಂದ ಸಾಗಿತು. ಉತ್ತಮ ಅವಕಾಶವೊಂದು ಕೈ ಜಾರಿತು. 35ನೇ ನಿಮಿಷದಲ್ಲೂ ಎಡುರಾಡೋ ತಮ್ಮ ಅನುಭವಕ್ಕೆ ತಕ್ಕಂತೆ ಆಡದೆ ಸಿಕ್ಕ ಅವಕಾಶದಲ್ಲಿ ಗೋಲು ಗಳಿಸುವಲ್ಲಿ ವಿಫಲವಾದರು. ಕೇರಳ ಪ್ರಥಮಾರ್ಧದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರದರ್ಶನ ನೀಡಲಿಲ್ಲ. ಇದರೊಂದಿಗೆ ಹೀರೋ ಇಂಡಿಯನ್ ಸೂಪರ್ ಲೀಗ್ ನ ಮೊದಲ ಪಂದ್ಯದ ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತು.

ಕಾಯುವಿಕೆ ಮುಗಿಯಿತು….ಫುಟ್ಬಾಲ್ ಋತು ಆರಂಭ

 

ಕೊರೋನಾ ಮಾರಿಯಿಂದ ಕ್ರೀಡಾ ಜಗತ್ತು ಮೌನಕ್ಕೆ ಶರಣಾಗಿತ್ತು. ಭಾರತದಲ್ಲಿ ಕಳೆದ ಎಂಟು ತಿಂಗಳಿಂದ ಯಾವುದೇ ಕ್ರೀಡಾ ಚಟುವಟಿಕೆಗಳು ನಡೆದಿರಲಿಲ್ಲ. ಆದರೆ ಇಂಡಿಯನ್ ಸೂಪರ್ ಲೀಗ್ ಪ್ರೇಕ್ಷಕರ ಅನುಪಸ್ಥಿತಿಯಲ್ಲಿ ಗೋವಾದಲ್ಲಿ ನಡೆಯಲಿದೆ, ಸಂಕಷ್ಟಗಳ ನಡುವೆ ಬದುಕು ಜೀವಂತವಾಗಿರಬೇಕಾದರೆ ಅಲ್ಲಿ ಕ್ರೀಡೆ ಇರಲೇಬೇಕು. ಅದಕ್ಕಾಗಿಯೇ ಭಾರತದ ಪ್ರತಿಷ್ಟಿತ ಫುಟ್ಬಾಲ್ ಲೀಗ್ ಹೀರೋ ಇಂಡಿಯನ್ ಸೂಪರ್ ಲೀಗ್ ಗೆ ಗೋವಾದಲ್ಲಿ ಚಾಲನೆ ನೀಡಲಾಯಿತು. ಇಲ್ಲಿನ ಬಾಂಬೊಲಿಮ್ ಕ್ರೀಡಾಂಗಣದಲ್ಲಿ ಕೇರಳ ಬ್ಲಾಸ್ಟರ್ಸ್ ಎಫ್ ಸಿ ಹಾಗೂ ಎಟಿಕೆ ಮೋಹನ್ ಬಾಗನ್ ತಂಡಗಳು ಮುಖಾಮುಖಿಯಾದವು. ಎಟಿಕೆ ತಂಡ ಕೋಲ್ಕೊತಾದ ಜನಪ್ರಿಯ ಫುಟ್ಬಾಲ್ ಕ್ಲಬ್ ಮೋಹನ್ ಬಾಗನ್ ಜತೆ ವಿಲೀನವಾಗಿರುವದರಿಂದ ಕೋಲ್ಕತಾದ ಈ ತಂಡ ಈಗ ಬಲಿಷ್ಠ ತಂಡವಾಗಿ ಅಂಗಣಕ್ಕಿಳಿದಿದೆ. ಎಲ್ಲ ಆಟಗಾರರನ್ನೂ ಉಳಿಸಿಕೊಂಡಿರುವುದರಿಂದ ಈಗ ಎಟಿಕೆ ಮೋಹನ್ ಬಾಗನ್ ತಂಡ ಗುಣಮಟಟ್ಟದ ಆಟಗಾರರಿಂದ ಕೂಡಿದ ತಂಡವಡನಿಸಿದೆ. ರಾಯ್ ಕೃಷ್ಣ, ಡೇವಿಡ್ ವಿಲಿಯಮ್ಸ್, ಜಾವಿ ಹೆರ್ನಾಂಡೆಸ್, ಮೈಕಲ್ ಸೂಸಾಯಿರಾಜ್, ಸಂದೇಶ್ ಜಿಂಗಾನ್ ಮತ್ತು ತಿರಿ ಅವರಿಂದ ಕೂಡಿದ ಮೋಹನ್ ಬಾಗನ್ ಸಹಜವಾಗಿಯೇ ಬಲಿಷ್ಠ ತಂಡವಾಗಿದೆ.

ಎರಡು ಬಾರಿ ರನ್ನರ್ ಅಪ್ ಗೌರವಕ್ಕೆ ಪಾತ್ರವಾಗಿರುವ ಕೇರಳ ಬ್ಲಾಸ್ಟರ್ಸ್ ತಂಡ 2016ರಿಂದ ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾಗಿದೆ. ಈ ಬಾರಿ ತಂಡ ಹೊಸ ಆಟಗಾರರಿಂದ ಕೂಡಿ ಸಂಪೂರ್ಣವಾಗಿ ಬದಲಾಗಿದೆ. ಗ್ಯಾರಿ ಹೂಪರ್, ಬಕಾರಿ ಕೋನ್, ಫಕಂದೋ ಪೆರೆಯಾರ್, ವಿಸೆಂಟೆ ಗೊಮೇಜ್, ನಿಶುಕುಮಾರ್ ಮೊದಲಾದ ಪ್ರಮುಖ ಆಟಗಾರರು ತಂಡವನ್ನು ಸೇರಿದ್ದು ಕೇರಳಕ್ಕೆ ಹೊಸ ರೂಪು ನೀಡಿದೆ. ಮಿಡ್ ಫೀಲ್ಡ್ ವಿಭಾಗ ಉತ್ತಮವಾಗಿದ್ದರೂ ಡಿಫೆನ್ಸ್ ವಿಭಾಗದ ಬಗ್ಗೆ ಕೇರಳ ಎಚ್ಚರವಹಿಸಬೇಕಾದ ಅಗತ್ಯ ಇದೆ.

Related Articles