Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಅಹಮದಾಬಾದ್‌ಗೆ ಜಯ ತಂದ ಅಂಗಮುತ್ತು

sportsmail:

ರೂಪೇ ಪ್ರೈಮ್‌ ವಾಲಿಬಾಲ್‌ ಲೀಗ್‌ನ ಐದನೇ ಪಂದ್ಯದಲ್ಲಿ ಅದ್ಭುತ ಆಟ ಪ್ರದರ್ಶಿಸಿದ ಆಹಮದಾಬಾದ್‌ ಡಿಫೆಂಡರ್ಸ್‌ ತಂಡ ಕ್ಯಾಲಿಕಟ್‌ ಹೀರೋಸ್‌ ವಿರುದ್ಧ 3-2 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದೆ.

ಇಲ್ಲಿನ ಗಾಚಿ ಬೌಲಿ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಆರಂಭದ ಸೆಟ್‌ನಲ್ಲಿ ಸೋಲನುಭವಿಸಿದರೂ ನಂತರ ಚೇತರಿಸಿಕೊಂಡ ಅಹಮದಾಬಾದ್‌ ಡಿಫೆಂಡರ್ಸ್‌ 12-15, 15-11, 10-15, 15-12, 15-11 ಅಂತರದಲ್ಲಿ ಜಯ ಗಳಿಸಿತು. ತಂಡದ ಡಿಫೆಂಡರ್‌ ಅಂಗಮುತ್ತು ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

 

ಎರಡೂ ತಂಡಗಳು ಆರಂಭದಿಂದಲೂ ಉತ್ತಮ ಆಟ ಪ್ರದರ್ಶಿಸಿದವು, ಪರಿಣಾಮ ಪಂದ್ಯ ಒಂದು ಹಂತದಲ್ಲಿ 6-6ರ ಸಮಬಲದಲ್ಲಿ ಸಾಗಿತ್ತು. ಡಿಫೆಂಡರ್ಸ್‌ ಪರ  ರೆಯಾನ್‌ ಮೀಹಾನ್‌ ಮತ್ತು ಹೀರೋಸ್‌ ಪರ ಅಜಿತ್‌ ಸಿ. ದಿಟ್ಟ ಹೋರಾಟ ನೀಡಿದರು. ಆದರೆ ಕ್ಯಾಲಿಕಟ್‌ ಸೂಪರ್‌ ಪಾಯಿಂಟ್‌ ಗಳಿಸಿ 13-10 ಅಂತರದಲ್ಲಿ ಮೇಲುಗೈ ಸಾಧಿಸಿತು. ಮತ್ತೆ ಹಿಂದಿರುಗಿ ನೋಡದ ಕ್ಯಾಲಿಕಟ್‌ 15-12 ಅಂತರದಲ್ಲಿ ಮೊದಲ ಸೆಟ್‌ ಗೆದ್ದುಕೊಂಡಿತು.

ಎರಡನೇ ಸೆಟ್‌ನಲ್ಲಿ ಮುಜೀಬ್‌ ಎಂಸಿ ಉತ್ತಮ ರೀತಿಯಲ್ಲಿ ಬ್ಲಾಕ್‌ ಮಾಡುವುದರೊಂದಿಗೆ ಕ್ಯಾಲಿಕಟ್‌ ಹೀರೋಸ್‌ 5-2 ಅಂತರದಲ್ಲಿ ಮುನ್ನಡೆ ಕಂಡಿತ್ತು. ಡಿಫೆಂಡರ್ಸ್‌ ಪರ ನಾಯಕ ಮುತ್ತುಸ್ವಾಮಿ ಉತ್ತಮ ಬ್ಲಾಕ್‌ ಪ್ರದರ್ಶಿಸಿ ತಂಡಕ್ಕೆ 7-7ರಲ್ಲಿ ಸಮಬಲಗೊಳ್ಳುವಂತೆ ಮಾಡಿದರು. ನಂತರ ಅಂಗಮುತ್ತು ಬ್ಲಾಕ್‌ ಮತ್ತು ಸ್ಪೈಕ್‌ ಮೂಲಕ ಉತ್ತಮ ಆಟ ಪ್ರದರ್ಶಿಸಿ ಅಂಗಮುತ್ತು ತಂಡ ಎರಡನೇ ಸೆಟ್‌ ಗೆಲ್ಲುವಂತೆ ಮಾಡಿದರು.

ಹೀರೋಸ್‌ ಈ ಬಾರಿಯೂ ಆರಂಭದಲ್ಲೇ ಪಂದ್ಯದ ಮೇಲೆ ಹಿಡಿತ ಸಾಧಿಸಿ ಮೇಲುಗೈ ಕಂಡಿತು. 12-8 ರಲ್ಲಿ ಮುನ್ನಡೆ ಕಾಯ್ದುಕೊಂಡು ಸೆಟ್‌ ಗೆಲ್ಲಲು ವೇದಿಕೆ ನಿರ್ಮಿಸಿಕೊಂಡಿತು. ಅಜಿತ್‌ ಲಾಲ್‌ ಅವರ ಬ್ಲಾಕ್‌ ಮತ್ತು ಸ್ಪೈಕ್‌ ನೆರವಿನಿಂದ ಹೀರೋಸ್‌ ಮೂರನೇ ಸೆಟ್‌ ಗೆದ್ದು 2-1ರಲ್ಲಿ ಮುನ್ನಡೆ ಕಂಡುಕೊಂಡಿತು.

ನಾಲ್ಕನೇ ಸೆಟ್‌ನಲ್ಲಿ ಶೊನ್‌ ಜಾನ್‌ ಅವರ ಸ್ಪೈಕ್‌ ನೆರವಿನಿಂದ ಡಿಫೆಂಡರ್ಸ್‌ 7-4 ಅಂತರದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಅಂತಿಮ ಹಂತದವರೆಗೂ ಮುನ್ನಡೆಯನ್ನು ಕಾಯ್ದುಕೊಂಡು 15-12 ಅಂತರದಲ್ಲಿ ನಾಲ್ಕನೇ ಸೆಟ್‌ ಡಿಫೆಂಡರ್ಸ್‌ ಪಾಲಾಯಿತು. ಪರಿಣಾಮ ಪಂದ್ಯ 2-2ರಲ್ಲಿ ಸಮಬಲಗೊಂಡಿತು.

ಅಂತಿಮ ಸೆಟ್‌ನಲ್ಲಿ ಅಹಮದಾಬಾದ್‌ ಡಿಫೆಂಡರ್ಸ್‌ ಆರಂಭದಲ್ಲೇ 6-2 ಅಂತರದಲ್ಲಿ ಮುನ್ನಡೆ ಕಂಡು ಜಯಕ್ಕೆ ವೇದಿಕೆ ನಿರ್ಮಿಸಿಕೊಂಡಿತು. ಅಂಗಮುತ್ತು ಅವರ ಸ್ಪೈಕ್‌ ಮತ್ತು ರೆಯಾನ್‌ ಮಿಹಾನ್‌ ಅವರ ಬ್ಲಾಕ್‌ ನೆರವಿನಿಂದ ಅಹಮದಾಬಾದ್‌ 15-11 ಅಂತರದಲ್ಲಿ ಸೆಟ್‌ ಗೆದ್ದು ಪಂದ್ಯ ವಿಜಯಿಯಾಯಿತು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.