ಬೆಂಗಳೂರು: ಟೀಮ್ ಇಂಡಿಯಾದ ಸ್ಪಿನ್ ಮಾಂತ್ರಿಕರಾದ ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ 2019ರಲ್ಲಿ ಇಂಗ್ಲೆಂಡ್ನಲ್ಲಿ ನಡೆಯಲಿರುವ ಐಸಿಸಿ ವಿಶ್ವಕಪ್ನಲ್ಲಿ ಆಡುವ ಸಾಧ್ಯತೆಗಳು ತುಂಬಾ ಕಡಿಮೆ.
![](http://thesports.in/wp-content/uploads/2018/02/Kuldeep-Yadav-and-Yuzvendra-Chahal-300x200.jpg)
ವಿಶ್ವಕಪ್ ತಂಡದಲ್ಲಿ ಅಶ್ವಿನ್ ಮತ್ತು ಜಡೇಜಾ ಸ್ಥಾನ ಪಡೆಯಲು ಸಾಧ್ಯವೇ ಇಲ್ಲ. ಏಕೆಂದರೆ ಯುವ ರಿಸ್ಟ್ ಸ್ಪಿನ್ನರ್ಗಳಾದ ಯುಜ್ವೇಂದ್ರ ಚೇಹಲ್ ಮತ್ತು ಕುಲ್ದೀಪ್ ಯಾದವ್ ಟೀಮ್ ಇಂಡಿಯಾದ ಸೀಮಿತ ಓವರ್ಗಳ ತಂಡಗಳಲ್ಲಿ (ಏಕದಿನ ಹಾಗೂ ಟಿ20) ತಮ್ಮ ಸ್ಥಾನವನ್ನು ಭದ್ರ ಪಡಿಸಿಕೊಂಡಿದ್ದಾರೆ.
ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಆತಿಥೇಯರ ವಿರುದ್ಧದ ಏಕದಿನ ಸರಣಿಯಲ್ಲಿ ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಮತ್ತು ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚೇಹಲ್ ಅವರ ಭರ್ಜರಿ ಪ್ರದರ್ಶನವನ್ನು ನೋಡಿದ ನಂತರವಂತೂ ಅಶ್ವಿನ್ ಹಾಗೂ ಜಡೇಜಾ ಅವರ ವಿಶ್ವಕಪ್ ಕನಸು ನನಸಾಗುವುದು ತುಂಬಾ ಕಷ್ಟ ಅನ್ನಿಸುತ್ತಿದೆ. ಏಕೆಂದರೆ ವೇಗದ ಬೌಲರ್ಗಳಿಗೆ ನೆರವಾಗುವ ದಕ್ಷಿಣ ಆಫ್ರಿಕಾದಲ್ಲಿ ಕುಲ್ದೀಪ್ ಮತ್ತು ಚೇಹಲ್ ಅದ್ಭುತ ಪ್ರದರ್ಶನ ತೋರಿದ್ದಾರೆ.
6 ಪಂದ್ಯಗಳ ಸರಣಿಯ ಮೊದಲ 5 ಪಂದ್ಯಗಳಲ್ಲಿ ಇವರಿಬ್ಬರು ಒಟ್ಟು 30 ವಿಕೆಟ್ಗಳನ್ನು ಉರುಳಿಸಿದ್ದಾರೆ. ಇದರಲ್ಲಿ ಕುಲ್ದೀಪ್ ಪಾಲು 16, ಚೇಹಲ್ ಗಳಿಕೆ 14. ವೇಗದ ಬೌಲರ್ಗಳ ಸ್ವರ್ಗದಲ್ಲಿ ಚೆಂಡನ್ನು ಅದ್ಭುತವಾಗಿ ತಿರುಗಿಸುತ್ತಿರುವ ಈ ಯುವ ಸ್ಪಿನ್ನರ್ಗಳು 2019ರ ವಿಶ್ವಕಪ್ ತಂಡದಲ್ಲಿರುವುದು ಬಹುತೇಕ ಪಕ್ಕಾ. ಹೀಗಾಗಿ ಅಶ್ವಿನ್ ಮತ್ತು ಜಡೇಜಾಗೆ ವಿಶ್ವಕಪ್ ಟಿಕೆಟ್ ಸಿಗುವ ಸಾಧ್ಯತೆ ತೀರಾ ಕಡಿಮೆ.