Thursday, April 18, 2024

ಇತಿಹಾಸ ಬರೆದ ಟ್ರಯಥ್ಲಾನ್ ಕಿಂಗ್ ಪ್ರಶಾಂತ್ ಹಿಪ್ಪರಗಿ

ಸೋಮಶೇಖರರ್ ಪಡುಕರೆ, ಬೆಂಗಳೂರು

ಐಪಿಎಲ್ ನಲ್ಲಿ ಯಾವುದೋ ಆಟಗಾರ ಕ್ಯಾಚ್ ಬಿಟ್ಟಿದ್ದಕ್ಕೆ ಇಡೀ ಜಗತ್ತೇ ಮುಳುಗಿದಂತೆ ಚಿಂತಿಸುವ ನಮಗೆ ಇತರ ಕ್ರೀಡೆಗಳಲ್ಲಿ ಸಾಧನೆ ಮಾಡಿದವರನ್ನು ಕನಿಷ್ಠ ಅಭಿನಂದಿಸಲು  ಸಮಯವೇ ಇರುವುದಿಲ್ಲ.

ವಿರಾಟ್ ಕೊಹ್ಲಿ ಬೆಂಗಳೂರು ನಾಯಕತ್ವ ತೊರೆದರೆ ನಮ್ಮ ರೋದನೆ ಮುಗಿಲು ಮುಟ್ಟುತ್ತದೆ. ಆದರೆ ಅದೇ ಸಂದರ್ಭದಲ್ಲಿ ಕನ್ನಡಿಗರೊಬ್ಬರು ಮೂರು ದಿನಗಳಲ್ಲಿ 15 ಕಿ.ಮೀ ಈಜು, ನಂತರ 75 ಕಿ.ಮೀ ಸೈಕ್ಲಿಂಗ್, ನಂತರ 325 ಕಿ.ಮೀ. ಸೈಕ್ಲಿಂಗ್, ಬಳಿಕ 100 ಕಿ.ಮೀ. ಓಟವನ್ನು ಪೂರ್ಣಗೊಳಿಸಿ ಜಗತ್ತಿನ ಅತ್ಯಂತ ಕಠಿಣ ಸ್ಪರ್ಧೆ ಹಾಕ್ಮ್ಯಾನ್ ಟ್ರಯಥ್ಲಾನ್  ಮುಗಿಸಿದ್ದು ಸುದ್ದಿ ಸ್ಥಳೀಯ ಸುದ್ದಿಯಾಗುತ್ತದೆ.

 

ದಾಂಡೇಲಿಯಲ್ಲಿ ನಡೆದ ಜಗತ್ತಿನ ಕಠಿಣ ಸ್ಪರ್ಧೆಗಳಲ್ಲಿ ಒಂದಾದ ಹಾಕ್ಮ್ಯಾನ್ ಟ್ರಯಥ್ಲಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಜಗತ್ತಿನ ಮೊದಲ ಸಾಧಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಬಿಜಾಪುರ ಜಿಲ್ಲೆಯ ಪ್ರಶಾಂತ್ ಹಿಪ್ಪರಗಿ.

ಮೂರು ದಿನಗಳ ಈ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಹೆಸರು ನೋಂದಾಯಿಸಿದ ಸಾಹಸಿಗಳು 10. ಅವರರಲ್ಲಿ ಐವರು ಸ್ಪರ್ಧೆಯ ಕಠಿಣತೆ ನೋಡಿ ಸ್ಪರ್ಧೆಗೆ ಮೊದಲೇ ಹಿಂದೆ ಸರಿದರು. ಇಬ್ಬರು ಸ್ಪರ್ಧಿಗಳು ಕಾಳಿ ನದಿಯ ನೀರನ್ನು ನೋಡಿ ಹಿಂದೆ ಸರಿದರು, ಕೊನೆಯಲ್ಲಿ ಮೂವರು ಸ್ಪರ್ಧೆಗೆ ಇಳಿದರು. ಎರಡನೇ ದಿನದಲ್ಲಿ ಮತ್ತೊಬ್ಬ ಸ್ಪರ್ಧಿ ಸ್ಪರ್ಧೆಯಲ್ಲಿ ಮುಂದುವರಿಯುವುದು ಅಸಾಧ್ಯ ಎಂದು ಸಂಘಟಕರಿಗೆ ತಿಳಿಸಿದರು. ಈಗ ಉಳಿದಿರುವುದು ಇಬ್ಬರು ಮಾತ್ರ.. ಕರ್ನಾಟಕದ ಪ್ರಶಾಂತ್ ಹಿಪ್ಪರಗಿ ಮತ್ತು ಗುಜರಾತ್ ನ ನಿರವ್. ಇಬ್ಬರೂ ಗುರಿ ತಲಪುವಲ್ಲಿ ಯಶಸ್ವಿಯಾದರು.

ಏನಿದು ಹಾಕ್ಮ್ಯಾನ್ ಟ್ರಯಥ್ಲಾನ್?

ಟ್ರಯಥ್ಲಾನ್ ಮೂರು ರೀತಿಯ ಸ್ಪರ್ಧೆಗಳಲ್ಲಿ ಕೂಡಿರುತ್ತದೆ. ಈಜು, ಸೈಕ್ಲಿಂಗ್ ಮತ್ತು ಓಟ. ಒಲಿಂಪಿಕ್ಸ್ ನಲ್ಲಿ  1.5 ಕಿ.ಮೀ. ಈಜು, 40 ಕಿಮೀ ಸೈಕ್ಲಿಂಗ್ ಮತ್ತು 10 ಕಿಮೀ ಓಟದ ಸ್ಪರ್ಧೆಗಳು ನಡೆಯುತ್ತವೆ. ಆದರೆ ಹಾಕ್ಮನ್ ಟ್ರಯಥ್ಲಾನ್ ನಲ್ಲಿ ಇದರ ಹತ್ತುಪಟ್ಟು ಹೆಚ್ಚು ಅಂತರ ಮತ್ತು ಕಠಿಣವಿರುತ್ತದೆ. ದಾಂಡೇಲಿಯಲ್ಲಿ ನಡೆದದ್ದು ಮೊದಲ ಹಾಕ್ಮನ್ ಟ್ರಯಥ್ಲಾನ್. ಇದರಲ್ಲಿ ಮೊದಲ ದಿನ 15 ಕಿ.ಮೀ ಈಜು, ನಂತರ 75 ಕಿ.ಮೀ ಸೈಕ್ಲಿಂಗ್.ಎರಡನೇ ದಿನದಲ್ಲಿ 325 ಕಿ.ಮೀ. ಗುಡ್ಡಗಾಡು ಪ್ರದೇಶದಲ್ಲಿ ಸೈಕ್ಲಿಂಗ್, ಮೂರನೇ ದಿನದಲ್ಲಿ 100 ಕಿ.ಮೀ. ಓಟ. ಇದಕ್ಕೆ ಆಯ್ಕೆಮಾಡಿಕೊಳ್ಳುವ ಸ್ಥಳವೂ ಕಠಿಣವಾಗಿರುತ್ತದೆ. ಸಾಹಸಿಗರಿಗೆ ಕಠಿಣ ಸವಾಲೊಡ್ಡುವುದು ದಾಮಡೇಲಿ. ಕಾಳಿ ನದಿ, ಪಶ್ಚಿಮ ಘಟ್ಟ ಇಲ್ಲಿ ಸವಾಲನ್ನು ಪೂರ್ಣಗೊಳಿಸುವವರು ನಿಜವಾದ ಸೂಪರ್ ಮ್ಯಾನ್.

ಪ್ರಶಾಂತ್ ಹಿಪ್ಪರಗಿ ಸಾಧನೆ:

ಹಿಂದೆ ಐರನ್ ಮ್ಯಾನ್ ಸ್ಪರ್ಧೆಯನ್ನು ಪೂರ್ಣಗೊಳಿಸಿರುವ ಪ್ರಶಾಂತ್ ಹಿಪ್ಪರಗಿ ಹಾಕ್ಮನ್ ಟ್ರಯಥ್ಲಾನ್ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ತೋರಿ ಗುರಿ ತಲುಪಿದ್ದಾರೆ.

ಅಕ್ಟೋಬರ್ 7, 8 ಮತ್ತು 10 ರಂದು ದಾಂಡೇಲಿ, ಜೊಯಿಡಾ, ಹಳಿಯಾಳ, ರಾಂನಗರ ಮತ್ತು ಅಳ್ವಾವರ್ ಗುಡ್ಡಗಾಡಿನಲ್ಲಿ ಮತ್ತು ಕಾಳಿ ನದಿಯಲ್ಲಿ ಈ ಸ್ಪರ್ಧೆ ನಡೆದಿತ್ತು. ಮೊದಲ ದಿನದಲ್ಲಿ 15 ಕಿ,ಮೀ. ಈಜನ್ನು ಪ್ರಶಾಂತ್ ಹಿಪ್ಪರಗಿ 6 ಗಂಟೆ 15 ನಿಮಿಷಗಳಲ್ಲಿ ಪೂರ್ಣಗೊಳಿಸಿದರು. ಆ ನಂತರ 75 ಕಿಮೀ ಗುಡ್ಡಗಾಡು ಸೈಕ್ಲಿಂಗ್ ನಲ್ಲಿ 3 ಗಂಟೆ 45 ನಿಮಿಷಗಳಲ್ಲಿ ಗುರಿ ತಲುಪಿದರು.

ಎರಡನೇ ದಿನದಲ್ಲಿ 325 ಕಿ.ಮೀ. ಅಂತರವನ್ನು ಸೈಕ್ಲಿಂಗ್ ನಲ್ಲಿ ಕ್ರಮಿಸಲು ಪ್ರಶಾಂತ್ ಹಿಪ್ಪರಗಿ 14 ಗಂಟೆ 15 ನಿಮಿಷ ತೆಗೆದುಕೊಂಡರು.

ಮೂರನೇ ದಿನಲ್ಲಿ 100 ಕಿಮೀ ಗುಡ್ಡಗಾಡು ಓಟ. 14 ಗಂಟೆ 45 ನಿಮಿಷದಲ್ಲಿ ಗುರಿ ತಲುಪಿದ ಪ್ರಶಾಂತ್ ಹಿಪ್ಪರಗಿ ಭಾರತದ ಕ್ರೀಡಾ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದರು.

ಈ ಮೂರು ಹಂತಗಳ ಗುರಿಯನ್ನು ಒಟ್ಟು 45 ಗಂಟೆಗಳಲ್ಲಿ ಪೂರ್ಣಗೊಳಿಸಬಹುದಾಗಿತ್ತು. ಆದರೆ ಪ್ರಶಾಮತ್ ಹಿಪ್ಪರಗಿ ಕೇವಲ 40 ಗಂಟೆಗಳಲ್ಲಿ ಪೂರ್ಣಗೊಳಿಸಿ ಪ್ರಭುತ್ವ ಸಾಧಿಸಿದರು.

ಅರ್ಧ ಹಿಮಾಲಯವೇರಿದ ಸಾಧನೆ!!!!

ಜಗತ್ತಿನ ಅತ್ಯಂತ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಎತ್ತರ 8,849 ಮೀ. ದಾಂಡೇಲಿಯ ಪರ್ವತ ಪ್ರದೇಶದಲ್ಲಿ ಒಂದು ದಿನ ಸೈಕ್ಲಿಂಗ್ ಮಾಡಿದರೆ ಶೇ. 50 ರಷ್ಟು ಮೌಂಟ್ ಎವರೆಸ್ಟ್ ಎತ್ತರವನ್ನ ಕ್ರಮಿಸಿದಂತೆ ಅಂದರೆ 4,450 ಮೀ. ಕ್ರಮಿಸಿದಂತಾಗುತ್ತದೆ. ಓಟದಲ್ಲಿ 1050 ಮೀ. ಎತ್ತರವನ್ನು ಕ್ರಮಿಸಿದಂತೆ. ಎಂದು ಪ್ರಶಾಂತ್ ಹಿಪ್ಪರಗಿ ತಮ್ಮ ಸಾಧನೆಯನ್ನು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಹಿಪ್ಪರಗಿ ಕುಟುಂಬದ ಹೆಮ್ಮೆ:

ಪ್ರಶಾಂತ್ ಹಿಪ್ಪರಗಿ ಅವರ ತಂದೆ ಪರಪ್ಪ ಹಿಪ್ಪರಗಿ ಉತ್ತಮ ಕ್ರೀಡಾಪಟು ಹಲವಾರು ಬಾರಿ ರಾಜ್ಯಮಟ್ಟದಲ್ಲಿ ಮಿಂಚಿದವರು. ಪ್ರಶಾಂತ್ ಅವರ ಮಗ ಪ್ರಣೀತ್ ಚಿಕ್ಕವಯಸ್ಸಿನಲ್ಲೇ ಮ್ಯಾರಥಾನ್ ಓಡುವ ಸಾಧಕ. ಹೀಗೆ ತಂದೆ ಮತ್ತು ಮಗನಿಂದ ಸ್ಫೂರ್ತಿ ಪಡೆದ 96 ಕೆಜಿ ತೂಕದ ಪ್ರಶಾಂತ್ ಹಿಪ್ಪರಗಿ ಹಾಪ್ಮನ್ ಟ್ರಯಥ್ಲಾನ್ ಪೂರ್ಣಗೊಳಿಸಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗುತ್ತಾರೆಂದರೆ ಅದು ನಿಜವಾದ ಕ್ರೀಡಾಸ್ಫೂರ್ತಿ. ಪ್ರಶಾಂತ್ ಹಿಪ್ಪರಗಿ ಅವರು ಮುಂದಿನ ಗುರಿ ಡೆಕಾಮ್ಯಾನ್. ಅಮೆರಿಕದಲ್ಲಿ ನಡೆಯುವ ಈ ಸ್ಪರ್ಧೆಯು 10 ಐರನ್ ಮ್ಯಾನ್ ಸ್ಪರ್ಧೆಯಿಂದ ಕೂಡಿರುತ್ತದೆ. ರಾತ್ರಿ ಮಲಗಲು ಮಾತ್ರ ಅವಕಾಶ. ಬಾಕಿ ಎಲ್ಲ ಸಂದರ್ಭದಲ್ಲೂ ಸ್ಪರ್ಧೆ ನಡೆಯುತ್ತಿರುತ್ತದೆ. ಪ್ರಶಾಂತ್ ಅವರು 2023ರ ವಿಭಾಗದಲ್ಲಿ ಸ್ಪರ್ಧಿಸಲಿದ್ದು, ಅದಕ್ಕಾಗಿ ಎರಡು ವರ್ಷಗಳ ಕಠಿಣ ಅಭ್ಯಾಸದ ಅಗತ್ಯ ಇದೆ ಎಂದಿದ್ದಾರೆ.

ಯಶಸ್ಸಿನ ಹಿಂದೆ ಯಶಸ್ವಿ ತಂಡ

ಈ ಸಾಧನೆಗೆ ಫಿಟ್ನೆಸ್ ಬಹಳ ಮುಖ್ಯ. ಅದಕ್ಕೆ ಆಹಾರ ಕ್ರಮವನ್ನು ಪಾಲಿಸುವುದು ಅನಿವಾರ್ಯ. ಆ ಕೆಲಸವನ್ನು ಪ್ರಶಾಂತ್ ಹಿಪ್ಪರಗಿ ಅವರ ಪತ್ನಿ ಅನಿತಾ ಹಿಪ್ಪರಗಿ ನೋಡಿಕೊಳ್ಳುತ್ತಾರೆ.  ಪ್ರತಿಯೊಂದು ಹಂತದಲ್ಲಿ ನೆರವಾದವರು ಕ್ರ್ಯೂ ಮೆಂಬರ್ ಸ್ವಯಂ ಖಟಾರೆ ಮತ್ತು ಅಕ್ಷಯ್ ಚೆನ್ನಗೌಡ, ಯಾವಾಗಲೂ ನೆರವಾಗುವ ಪ್ರಶಾಂತ್ ಹಿಪ್ಪರಗಿಯವರೇ ಸ್ಥಾಪಿಸಿರುವ ಟೀಮ್ ಇನ್ಪಿರೇಷನ್ ನ ಸದಸ್ಯರು, ನಾಲ್ಕೂ ದಿನಗಳ ಕಾಲ ಸಂಪೂರ್ಣ ಸಹಕಾರ ನೀಡಿದ ಸೈಕ್ಲಿಂಗ್ ಜೊತೆಗಾರರಾದ ಮುರುಗೇಶ್ ಚೆನ್ನಾವರ್ ಹಾಗೂ ಸದಾನಂದ ಅಮರಾಪುರ. ಪ್ರಶಾಂತ್ ಹಿಪ್ಪರಗಿ ಅವರು ಉದ್ಯೋಗಿಯಾಗಿರುವ ರೆಫ್ಯೂ ಡ್ರೈವ್ ಕಂಪೆನಿಯು ಎಲ್ಲ ರೀತಿಯ ನೆವರನ್ನು ನೀಡಿದೆ.

ಕಾಮನ್ ಮ್ಯಾನ್ ಆಗಿದ್ದ ಪ್ರಶಾಂತ್ ಹಿಪ್ಪರಗಿ ಐರನ್ ಮ್ಯಾನ್, ಟೈಗರ್ ಮ್ಯಾನ್, ಹಾಕ್ಮ್ಯಾನ್ ಆಗಿ ಮುಂದೆ ಡೆಕಾಮ್ಯಾನ್ ಆಗುವ ಗುರಿಹೊಂದಿದ್ದಾರೆ.

Related Articles