ಜಮಖಂಡಿಯ ಶಿವ ಪೂಜಾರಿಗೆ ಮೈಸೂರು ಕುಸ್ತಿ ಚಾಂಪಿಯನ್ ಪಟ್ಟ
ಮೈಸೂರು: ಈ ಬಾರಿಯ ದಸರಾ ಕಂಠೀರವ ಪ್ರಶಸ್ತಿ ವಿಜೇತ ಕುಸ್ತಿಪಟು, ಹಾಗೂ ಕುಸ್ತಿ ಗುರು ರತನ್ ಮಠಪತಿ ಅವರ ಶಿಷ್ಯ ಜಮಖಂಡಿಯ ಶಿವಯ್ಯ ಪೂಜಾರಿ ಮೈಸೂರಿನಲ್ಲಿ ನಡೆದ ಆಹ್ವಾನಿತ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಎರಡು ಬಾರಿ ಕರ್ನಾಟಕ ಕೇಸರಿ ಪ್ರಶಸ್ತಿ ವಿಜೇತ ದಾವಣಗೆರೆಯ ಕಿರಣ್ ಭದ್ರಾವತಿ ವಿರುದ್ಧ ಅತ್ಯಂತ ರೋಚಕವಾಗಿ ಜಯ ಗಳಿಸಿ ಚಾಂಪಿಯನ್ ಪಟ್ಟ ಗೆದ್ದಿದ್ದಾರೆ. Shiva Pujari from Jamakhandi won the Mysore Wrestling Championship.
ಈ ಕಾರ್ಯಕ್ರಮದಲ್ಲಿ ಮಾಜಿ ಅಂತಾರಾಷ್ಟ್ರೀಯ ಕುಸ್ತಿಪಟು ಹಾಗೂ ಕುಸ್ತಿ ಗುರುಗಳಾದ ರತನ್ ಮಠಪತಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಬೇಕಾಗಿತ್ತು, ಆದರೆ ಅನಿವಾರ್ಯ ಕಾರಣಗಳಿಂದ ಅವರು ಪಾಲ್ಗೊಂಡಿರಲಿಲ್ಲ. ಅವರ ಸ್ಥಾನದಲ್ಲಿ ಅಂತಾರಾಷ್ಟ್ರೀಯ ಮಾಜಿ ಕುಸ್ತಿಪಟು ಎಂ.ಆರ್. ಶರ್ಮಾಜಿ ಅವರು ಪಾಲ್ಗೊಂಡಿದ್ದರು.
ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಿರಣ್ ಹಾಗೂ ಶಿವಯ್ಯ ಅವರ ನಡುವಿನ ಹೋರಾಟ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಯಿತು. ಅಂತಿಮವಾಗಿ ಶಿವಯ್ಯ ಜಯ ಸಾಧಿಸುವಲ್ಲಿ ಸಫಲರಾದರು.
ಕುಸ್ತಿಯಲ್ಲಿ ಇನ್ನಷ್ಟು ಹೆಚ್ಚಿನ ಅನುಭವ ಪಡೆಯುವ ಸಲುವಾಗಿ ಶಿವಯ್ಯ ಪೂಜಾರಿಯವರು ಹರಿಯಾಣಕ್ಕೆ ತೆರಳಿದ್ದಾರೆ.
ಮೈಸೂರು ಜಿಲ್ಲಾ ಕುಸ್ತಿ ಸಂಘವು ಈ ಕುಸ್ತಿ ಪಂದ್ಯಾವಳಿಯನ್ನು ಆಯೋಜಿಸಿತ್ತು. ಶ್ರೀ ಜಯಚಾಮರಾಜ ಒಡೆಯರ್ ಸಾಹುಕಾರ ಚೆನ್ನಯ್ಯ ಕುಸ್ತಿ ಅಖಾಡ, ದೊಡ್ಡಕೆರೆ ಮೈದಾನ, ಮೈಸೂರು ಇಲ್ಲಿ ಪಂದ್ಯಾವಳಿ ನಡೆದಿತ್ತು.