ಜೈಪುರ: ಇಲ್ಲಿನ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ನ ಅಥ್ಲೆಟಿಕ್ಸ್ ವಿಭಾಗದ ಮೊದಲ ದಿನದ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿದ್ದ ಮೂಡಬಿದಿದೆಯ ಆಳ್ವಾಸ್ನ ನಾಗೇಂದ್ರ ಅಣ್ಣಪ್ಪ ನಾಯ್ಕ್ ಭಟ್ಕಳ ಅವರು ಡಿಸ್ಕಸ್ ಎಸೆತದಲ್ಲಿ ಚಿನ್ನ ಗೆದ್ದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. Nagendra Naik from Alvas sports foundation won the gold medal in Discus throw at Khelo India University Games Jaipur
ಭಟ್ಕಳ ತಾಲೂಕಿನ ಬೆಳಕೆ ಗ್ರಾಮದ ಆಟೋ ಚಾಲಕ ಅಣ್ಣಪ್ಪ ಅವರ ಮಗ ನಾಗೇಂದ್ರ ನಾಯ್ಕ್ 53.23 ಮೀ. ದೂರಕ್ಕೆ ಡಿಸ್ಕಸ್ ಎಸೆದು ಚಿನ್ನದ ಪದಕ ಗೆದ್ದರು. 54.86 ಮೀ. ನಾಗೇಂದ್ರ ಅವರ ವೈಯಕ್ತಿಕ ಉತ್ತಮ ಸಾಧನೆಯಾಗಿತ್ತು.
ಚಿನ್ನ ಗೆದ್ದ ನಂತರ sportsmail ಜೊತೆ ಮಾತನಾಡಿದ ನಾಗೇಂದ್ರ, “ಈ ಸಾಧನೆ ಮಾಡಲು ಪ್ರೋತ್ಸಾಹಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಡಾ. ಮೋಹನ್ ಆಳ್ವಾ ಅವರಿಗೆ ನಾನು ಚಿರ ಋಣಿಯಾಗಿದ್ದೇನೆ. ನಮ್ಮಂಥ ಬಡವರ ಮನೆಯ ಮಕ್ಕಳನ್ನು ಗುರುತಿಸಿ, ಪ್ರೋತ್ಸಾಹಿಸುತ್ತಿರುವ ಅವರ ಕಾರ್ಯ ದೇವರು ಮೆಚ್ಚುವಂಥದ್ದು. ರಾಷ್ಟ್ರ ಮಟ್ಟದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸ್ಪರ್ಧಿಸುವ ಹಂಬಲವಿದೆ. ಅದಕ್ಕಾಗಿ ಪ್ರಾಯೋಜಕರ ಅಗತ್ಯವಿದೆ. ಇನ್ನೂ ಉತ್ತಮ ರೀತಿಯಲ್ಲಿ ಪ್ರೋತ್ಸಾಹ ಸಿಕ್ಕರೆ ವಿಕಾಸ್ ಗೌಡ ಅವರಂತೆ ರಾಷ್ಟ್ರಕ್ಕೆ ಕೀರ್ತಿ ತರುವ ಹಂಬಲವಿದೆ,” ಎಂದರು.

“ಕ್ರೀಡೆ ನನಗೆ ಬದುಕುನ್ನು ನೀಡಿದೆ. ಬಡತದಲ್ಲೇ ಬದುಕಿದರೂ ಕ್ರೀಡೆ ಸಾಕಷ್ಟು ಗೌರವ ತಂದುಕೊಟ್ಟಿದೆ, ಡಿಸ್ಕಸ್ ಎಸೆತಕ್ಕೆ ದೈಹಿಕ ಸಾಮರ್ಥ್ಯವನ್ನು ಕಾಯ್ದುಕೊಳ್ಳಲು ಸಾಕಷ್ಟು ಹಣ ವ್ಯಯ ಮಾಡಬೇಕಾಗುತ್ತದೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೇ ಇರುತ್ತಿದ್ದರೆ ಹೊಟೆಲ್ಗಳಲ್ಲಿ ದುಡಿಯವುದೋ ಅಥವಾ ಶಾಮಿಯಾನದಲ್ಲಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುತ್ತಿತ್ತು, ಆದರೆ ಹಾಗಾಗಲಿಲ್ಲ,” ಎಂದು ಹೇಳಿದರು.

