Saturday, July 27, 2024

ಪಾಠ ಕಲಿಯದ ಶಾಕೀಬ್‌ನ ಆಟಕ್ಕಿಂತ ಕಾಟವೇ ಹೆಚ್ಚು!

ಬೆಂಗಳೂರು: ಶ್ರೀಲಂಕಾ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್‌ ಅವರನ್ನು ಟೈಮ್ಡ್‌ ಔಟ್‌‌ ಮಾಡುವಾಗ ಕ್ರೀಡಾ ಸ್ಫೂರ್ತಿಯನ್ನು ತೋರದ ಬಾಂಗ್ಲಾದೇಶದ ತಂಡದ ನಾಯಕ ಶಾಕೀಬ್‌ ಅಲ್‌ ಹಸನ್‌ ಕ್ರಿಕೆಟ್‌ನಲ್ಲಿ ತೋರಿದ ಆಟಕ್ಕಿಂತ ನೀಡಿದ ಕಾಟವೇ ಹೆಚ್ಚು. Controversial man of Bangladesh cricket Shakib Al Hasan.

ತಪ್ಪು ಮಾಡುವುದು ಸಹಜ, ಆದರೆ ತಪ್ಪಿನಿಂದ ಪಾಠ ಕಲಿಯದಿದ್ದರೆ ಅಂಥ ವ್ಯಕ್ತಿಗಳನ್ನು ಕ್ರೀಡೆಯಲ್ಲಿ ಮುಂದುವರಿಸುವುದು ತಪ್ಪು. ಅಂಗಣಲ್ಲಿ ಕ್ರೀಡಾ ಸ್ಫೂರ್ತಿಯನ್ನು ತೋರದ ಶಾಕೀಬ್‌ ಪತ್ರಕರ್ತರು ಕೇಳುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ,” ನಿಯಮ ಅಂದ ಮೇಲೆ ಪಾಲಿಸಬೇಕು, ಬೇಕಿದ್ದರೆ ಐಸಿಸಿ ಆ ನಿಯಮವನ್ನು ತೆಗೆದು ಹಾಕಲಿ,” ಎಂದು ತನ್ನ “ಸಾಧನೆ”ಯನ್ನು ಸಮರ್ಥಿಸಿಕೊಂಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಸೋತ ಎದುರಾಳಿ ತಂಡದ ನಾಯಕ ಮ್ಯಾಥ್ಯೂಸ್‌ ಅಭಿನಂದನೆ ಸಲ್ಲಿಸಲು ಬಂದಾಗ ನಗುತ್ತ ನಿರಾಕರಿಸಿರುವುದು ಅವರು ಕ್ರೀಡೆಯಿಂದ ಹಣ ಗಳಿಸಿದ್ದಾರೆಯೇ ಹೊರತು ಬೇರೇನನ್ನೂ ಕಲಿತಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಕ್ರಿಕೆಟ್‌ನಲ್ಲಿ ಶಾಕೀಬ್‌ ನೀಡಿದ ಕಾಟ ಒಂದು ಎರಡಲ್ಲ. ಅವರು ನಡೆದು ಬಂದ ಹಾದಿಯನ್ನೊಮ್ಮೆ ಹಿಂದುರಿಗಿ ನೋಡಿದಾಗ ಬರೇ ಉಡಾಫೆ, ಪೋಕರಿ, ಅಶಿಸ್ತು ಇವುಗಳೇ ತುಂಬಿಕೊಂಡಿದೆ. ಎರಡು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌‌ ಸಮಿತಿ (ಐಸಿಸಿ)ಯಿಂದ ನಿಷೇಧಕ್ಕೊಳಗಾಗಿದ್ದರೂ ಪಾಠ ಕಲಿಯದ ಇಂಥ ಕ್ರಿಕೆಟಿಗನನ್ನು ಬಾಂಗ್ಲಾದೇಶ ನಾಯಕನ್ನಾಗಿ ಮಾಡಿದೆ ಎಂದರೆ ಅವರಲ್ಲಿ ಆಟಗಾರರು ಬರ ಇದೆ ಎಂದೇ ಅರ್ಥ. ಅಂಪೈರ್‌ಗೆ ಹೊಡೆಯಲು ಹೋದದ್ದು, ಸ್ಟಂಪ್‌ ತುಳಿದದ್ದು, ಕ್ರೀಡಾಭಿಮಾನಿಯನ್ನು ಥಳಿಸಿದ್ದು, ಬುಕ್ಕಿಗಳ ಜೊತೆ ಸಂಪರ್ಕ ಹೊಂದಿದ್ದು ಇದೆಲ್ಲ ಶಾಕೀಬ್‌ ಅವರ ಕತೆಯಲ್ಲ ಜೀವವ.

2010ರಲ್ಲಿ ನ್ಯೂಜಿಲೆಂಡ್‌ ಮತ್ತು ಬಾಂಗ್ಲಾದೇಶ ನಡುವಿನ ಏಕದಿನ ಪಂದ್ಯದ ವೇಳೆ ಕ್ರೀಡಾಂಗಣದ ಸಿಬ್ಬಂದಿಯೊಬ್ಬರು ಸೈಡ್‌ ಸ್ಕ್ರೀನ್‌ ಬದಿಯಲ್ಲಿ ಹಾದು ಹೋದದ್ದಕ್ಕೆ ಸಿಟ್ಟುಗೊಂಡ ಶಾಕೀಬ್‌ ಬ್ಯಾಟಿ ಹಿಡಿದು ಹೊಡೆಯಲು ಹೋದದ್ದು ಕ್ರಿಕೆಟ್‌ ವಲಯದಲ್ಲಿ ಬಹಳ ಸುದ್ದಿ ಮಾಡಿತ್ತು. 2011ರ ವಿಶ್ವಕಪ್‌ ವೇಳೆ ವೆಸ್ಟ್‌ ಇಂಡೀಸ್‌ ವಿರುದ್ಧದ ಪಂದ್ಯ ಮುಗಿದ ನಂತರ ಶೇರ್‌ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಮಧ್ಯದ ಬೆರಳು ತೋರಿಸಿ ತಾನೇನೆಂಬುದನ್ನು ಮತ್ತೊಮ್ಮೆ ಕ್ರಿಕೆಟ್‌ ಜಗತ್ತಿಗೆ ತಿಳಿಸಿದರು.

2014ರಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ತನ್ನ ಮರ್ಮಾಂಗ ನೋಡಿ ಎನ್ನುವ ರೀತಿಯಲ್ಲಿ ಅಸಭ್ಯವಾಗಿ ಫೋಸು ಕೊಟ್ಟಿದ್ದಕ್ಕಾಗಿ ಮೂರು ಏಕದಿನ ಪಂದ್ಯಗಳಿಗೆ ನಿಷೇಧ ಹೇರಲಾಗಿತ್ತು. ಅಲ್ಲದೆ 2.5 ಲಕ್ಷ ರೂ. ದಂಡ ವಿಧಿಸಲಾಗಿತ್ತು. 2014ರಲ್ಲಿ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಪಂದ್ಯ, ಮಳೆಯಿಂದಾಗಿ ಮಧ್ಯೆ ಬಿಡುವು. ಈ ಸಂದರ್ಭದಲ್ಲಿ ತನ್ನ ಪತ್ನಿಗೆ ಯಾರೋ ಕ್ರಿಕೆಟ್‌ ಅಭಿಮಾನಿ ತೊಂದರೆ ನೀಡಿದ ಎಂಬ ಕಾರಣಕ್ಕಾಗಿ ಆ ಕ್ರಿಕೆಟ್‌ ಅಭಿಮಾನಿಯನ್ನು ಸಾರ್ವಜನಿಕವಾಗಿ ಥಳಿಸಿದ್ದು ಸಾಕಷ್ಟು ಸುದ್ದಿಯಾಗಿತ್ತು.

2014ರಲ್ಲಿ ನೂತನ ಕೋಚ್‌ ಚಂಡಿಕಾ ಹತುರಸಿಂಘಾ ಅವರಿಗೆ ರಾಷ್ಟ್ರೀಯ ತಂಡಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಸಂದೇಶ ಕಳುಹಿಸಿದ್ದು ವಿವಾದಕ್ಕೆ ಗುರಿಯಾಗಿತ್ತು. ಆ ಬಳಿಕ ಲಂಡನ್‌ಗೆ ವಿಮಾನದಲ್ಲಿ ತೆರಳಿ ಅಲ್ಲಿಂದ ಕೆರೆಬಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಆಡಲು ಯತ್ನಿಸುತ್ತಿರುವುದು ಗಮನಕ್ಕೆ ಬಂತು. ಈ ಕಾರಣಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ ಮೊದಲು ಆರು ತಿಂಗಳು ನಿಷೇಧ ಹೇರಿ ಬಳಿಕ ಮೂರೂವರೆ ತಿಂಗಳಿಗೆ ಕಡಿತಗೊಳಿಸಿತು. 2015 ರಲ್ಲಿ ನಡೆದ ಬಾಂಗ್ಲಾದೇಶ ಪ್ರೀಮಿಯರ್‌ ಲೀಗ್‌ ಪಂದ್ಯದ ವೇಳೆ ಎಲ್ಬಿಡಬ್ಲ್ಯು ಮನವಿಯನ್ನು ತಿರಸ್ಕರಿಸಿದ ಅಂಪೈರ್‌ ತನ್ವೀರ್‌ ಅಹಮದ್‌ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಕ್ಕಾಗಿ ಒಂದು ಪಂದ್ಯ ನಿಷೇಧ ಹಾಗೂ ದಂಡ ವಿಧಿಸಲಾಗಿತ್ತು.

2017ರಲ್ಲಿ ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳವುದಕ್ಕೆ ಮುನ್ನ ವಿವಾದಗಳಿಗೆ ಸನ್ನಿವೇಶಗಳಿಂದ ಹೊರಬಂದು ಮಾನಸಿಕ ಶಾಂತಿ ಪಡೆಯಲು ಆರು ತಿಂಗಳ ರಜೆ ಕೇಳಿದಾಗ ಕ್ರಿಕೆಟ್‌ ಮಂಡಳಿ ಮೂರು ತಿಂಗಳ ರಜೆ ನೀಡಿದ್ದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು. 2018ರಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ತಂಡಗಳ ನಡುವೆ ನಿದಾಹಾಸ್‌ ಟ್ರೋಫಿ ಪಂದ್ಯ ನಡೆಯುತಿರುವಾಗ ನೋ ಬಾಲ್‌ ವಿವಾದದ ಕಾರಣ ಅಂಗಣದಿಂದ ಹೊರ ನಡೆಯುವುದಾಗಿ ಎಚ್ಚರಿಕೆ ನೀಡಿದ್ದರು. ಆ ಪಂದ್ಯ ಮುಗಿದ ನಂತರ ಗಾಜಿನ ಬಾಗಿಲೊಂದನ್ನು ಪುಡಿ ಮಾಡಿ ತನ್ನ ನೈಜ ಗುಣ ಪ್ರದರ್ಶಿಸಿದರು. 2019ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಮಂಡಳಿಯು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯಡಿ ಎರಡು ವರ್ಚಗಳ ನಿಷೇಧ ಹೇರಿತ್ತು.

Related Articles