ಅಲ್ಟ್ರಾಮ್ಯಾನ್ ಆಸ್ಟ್ರೇಲಿಯಾ ಇತಿಹಾಸ ಬರೆದ ಸದಾನಂದ ಅಮರಾಪುರ
ಧಾರವಾಡ: ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ತಾಲೂಕು ಪಂಚಾಯತ್ ಹುಬ್ಬಳ್ಳಿನಲ್ಲಿ ಸಹಾಯಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಹಾಗೂ ಕರ್ನಾಟಕದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ನಲ್ಲಿ ಹೆಚ್ಚುವರಿ ಹುದ್ದೆ ಹೊಂದಿರುವ ಸದಾನಂದ ಅಮರಾಪುರ ಅವರು, ವಿಶ್ವಪ್ರಸಿದ್ಧ ಅಲ್ಟ್ರಾಮ್ಯಾನ್ ಆಸ್ಟ್ರೇಲಿಯಾ 2026 ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇದರೊಂದಿಗೆ ಅವರು ಈ ಕಠಿಣ ಅಲ್ಟ್ರಾ-ಎಂಡ್ಯೂರನ್ಸ್ ಸ್ಪರ್ಧೆಯನ್ನು ಪೂರ್ಣಗೊಳಿಸಿದ ಕರ್ನಾಟಕದ ಮೊದಲ ವ್ಯಕ್ತಿಯಾಗಿದ್ದಾರೆ. Sadananda Amarapura is the first Kannadigas to successfully complete the world-famous Ultraman Australia 2026.
ಅಲ್ಟ್ರಾಮ್ಯಾನ್ ಆಸ್ಟ್ರೇಲಿಯಾ ವಿಶ್ವದ ಅತ್ಯಂತ ಕಠಿಣ ಸಹಿಷ್ಣುತೆ ಕ್ರೀಡಾ ಸ್ಪರ್ಧೆಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದು, ಇದು ಮೂರು ದಿನಗಳ ಕಾಲ ನಡೆಯುತ್ತದೆ. ಈ ಸ್ಪರ್ಧೆಯಲ್ಲಿ ಒಟ್ಟು ಸುಮಾರು 515 ಕಿಲೋಮೀಟರ್ ದೂರವನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದರಲ್ಲಿ 10 ಕಿಮೀ ಈಜು, 421 ಕಿಮೀ ಸೈಕ್ಲಿಂಗ್ ಹಾಗೂ 84 ಕಿಮೀ ಅಲ್ಟ್ರಾ ಮ್ಯಾರಥಾನ್ ಓಟ ಒಳಗೊಂಡಿರುತ್ತದೆ. ಸದಾನಂದ ಅಮರಾಪುರ ಅವರು ಅಧಿಕೃತ ಕಟ್-ಆಫ್ ಸಮಯವಾದ 31 ಗಂಟೆ 35 ನಿಮಿಷ 09 ಸೆಕೆಂಡ್ ಒಳಗಾಗಿ ಈ ಸ್ಪರ್ಧೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ.


ತಮ್ಮ ಸಾಧನೆಯ ಕುರಿತು ಮಾತನಾಡಿದ ಸದಾನಂದ ಅಮರಾಪುರ ಅವರು, ಈ ಪ್ರಯಾಣವು ಸುಮಾರು ಎರಡು ವರ್ಷಗಳ ನಿರಂತರ ಶ್ರಮ, ತ್ಯಾಗ ಮತ್ತು ಶಿಸ್ತುಬದ್ಧ ತರಬೇತಿಯ ಫಲಿತಾಂಶವಾಗಿದೆ ಎಂದು ಹೇಳಿದರು. ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ (DYES) ಎರಡರಲ್ಲಿಯೂ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದರೂ ಸಹ ಅವರು ಕಚೇರಿ ಕೆಲಸದ ನಂತರ ರಾತ್ರಿ ವೇಳೆಯ ಸೈಕ್ಲಿಂಗ್, ಈಜು ಹಾಗೂ ಓಟದ ತರಬೇತಿಯನ್ನು ಮುಂದುವರಿಸಿದರು.
ಅವರು ಸಾಮಾಜಿಕ ಕಾರ್ಯಕ್ರಮಗಳು, ಪಾರ್ಟಿಗಳು, ಪ್ರವಾಸಗಳು ಮತ್ತು ವೈಯಕ್ತಿಕ ವಿನೋದಗಳನ್ನು ತ್ಯಜಿಸಿ ತಮ್ಮ ಕನಸಿನ ಸಾಧನೆಗೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದೇನೆ ಎಂದು ತಿಳಿಸಿದರು.

ಸದಾನಂದ ಅಮರಾಪುರ ಅವರು ತಮ್ಮ ಪತ್ನಿ ಮುಕ್ತ ಅವರು (ಕರ್ನಾಟಕ ಗ್ರಾಮೀಣ ಬ್ಯಾಂಕ್ನಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ) ಅವರಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಈ ಪ್ರಯಾಣದ ವೇಳೆ ಆಹಾರ, ತಯಾರಿ ಹಾಗೂ ಯೋಜನೆಗಳಲ್ಲಿ ಅವರು ನೀಡಿದ ಬೆಂಬಲವನ್ನು ಅವರು ಸ್ಮರಿಸಿದರು.
ಅವರು ತಮ್ಮ ಕೋಚ್ ಮತ್ತು ಸ್ನೇಹಿತ ಡೆ ಕ್ಕಮನ್ ಪ್ರಶಾಂತ್ ಹಿಪ್ಪರಗಿ ಅವರಿಗೆ ತರಬೇತಿ , ಪ್ರೇರಣೆ ಮತ್ತು ನಿರಂತರ ಮಾರ್ಗದರ್ಶನ ನೀಡಿದಕ್ಕಾಗಿ ಧನ್ಯವಾದಗಳನ್ನು ತಿಳಿಸಿದರು.

ಮ್ಯಾಕ್ಸ್, ತೀಯಾಗನ್, ಮಾರ್ಕ್, ಆನ್ ಮತ್ತು ಟ್ರಿಲೀಸ್ ಅವರನ್ನೊಳಗೊಂಡ ತಮ್ಮ Crew ತಂಡಕ್ಕೆ ಈ ಕಾರ್ಯಕ್ರಮದ ಸಮಯದಲ್ಲಿ ನೀಡಿದ ಅಪೂರ್ವ ಬೆಂಬಲ ಮತ್ತು ಪ್ರೋತ್ಸಾಹಕ್ಕಾಗಿ ವಿಶೇಷ ಕೃತಜ್ಞತೆ ಸಲ್ಲಿಸಿದರು. ಈ ಐತಿಹಾಸಿಕ ಸಾಧನೆಯನ್ನು ತಮ್ಮ ದಿವಂಗತ ತಂದೆ ನಿವೃತ್ತ DySP ಶ್ರೀ ಎಚ್. ಎನ್. ಅಮರಾಪುರ ಅವರಿಗೆ ಸಮರ್ಪಿಸಿದ್ದಾರೆ. ಅವರು ತಮ್ಮ ಕಾಲದಲ್ಲಿ ಒಬ್ಬ ಶ್ರೇಷ್ಠ ಕುಸ್ತಿಪಟು ಮತ್ತು ಅಥ್ಲೀಟ್ ಆಗಿದ್ದರು. ಅವರ ಆಶೀರ್ವಾದ, ಪ್ರೇರಣೆ ಮತ್ತು ಶಿಸ್ತು ಸದಾನಂದ ಅಮರಾಪುರ ಅವರ ಜೀವನದ ಪ್ರತಿಯೊಂದು ಹಂತದಲ್ಲೂ ಮಾರ್ಗದರ್ಶನ ನೀಡಿದೆ. ಈ ಸಾಧನೆಯು ಕರ್ನಾಟಕ ಹಾಗೂ ಭಾರತದ ಯುವಜನತೆಗೆ ದೊಡ್ಡ ಕನಸುಗಳನ್ನು ಕಾಣಲು, ಶಿಸ್ತುಬದ್ಧರಾಗಲು ಮತ್ತು ತಮ್ಮ ಗುರಿಗಳನ್ನು ಸಾಧಿಸಲು ಪ್ರೇರಣೆಯಾಗಲಿ ಎಂದು ಅವರು ಆಶಿಸಿದ್ದಾರೆ.
ಸದಾನಂದ ಅಮರಾಪುರ ಅವರು ತಮ್ಮ ಈ ಪ್ರಯಾಣದಲ್ಲಿ ಬೆಂಬಲ ನೀಡಿದ ಎಲ್ಲಾ ಸ್ನೇಹಿತರು, ಹಿತೈಷಿಗಳು ಮತ್ತು ಕುಟುಂಬ ಸದಸ್ಯರಿಗೆ ಧನ್ಯವಾದಗಳನ್ನು ತಿಳಿಸಿದರು.

